ಮಂಡ್ಯ: ಸುಪ್ರೀಂ ಕೋರ್ಟ್ನಲ್ಲಿ ಕಾವೇರಿ ನದಿ ನೀರಿನ ವಿವಾದ ಕುರಿತು ರಾಜ್ಯದ ಪರವಾಗಿ ವಾದಿಸುತ್ತಿರುವ ವಕೀಲ ಫಾಲಿ ಎಸ್.ನಾರಿಮನ್ ಅವರು ಜಿಲ್ಲೆಗೆ ಸೋಮವಾರ ಭೇಟಿ ನೀಡಿದ್ದರು.
ಪ್ರವಾಸಿ ಮಂದಿರದಲ್ಲಿ ಕೆಲಕಾಲ ತಂಗಿದ್ದ ಅವರು, ನಂತರ ಶ್ರೀರಂಗಪಟ್ಟಣ ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮಕ್ಕೂ ಭೇಟಿ ನೀಡಿದ್ದರು. ಅಲ್ಲಿಂದ ಮಡಿಕೇರಿಗೆ ತೆರಳಿದರು.`ಕಾವೇರಿ ನದಿ ನೀರಿನ ವಿವಾದವನ್ನು ನ್ಯಾಯಾಲಯದ ಮೂಲಕ ಪರಿಹರಿಸುವುದು ಕಷ್ಟ. ಉಭಯ ರಾಜ್ಯಗಳ ರೈತರು, ಜನಪ್ರತಿನಿಧಿಗಳು ಪರಸ್ಪರ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ನಾರಿಮನ್ ತಮಗೆ ತಿಳಿಸಿದ್ದಾಗಿ ಅವರನ್ನು ಭೇಟಿ ಮಾಡಿದ್ದ ರೈತ ಸಂಘದ ವರಿಷ್ಠ ಕೆ.ಎಸ್.ಪುಟ್ಟಣ್ಣಯ್ಯ `ಪ್ರಜಾವಾಣಿ'ಗೆ ತಿಳಿಸಿದರು.
ನ್ಯಾಯಾಲಯದಲ್ಲಿ ವಾದ, ಪ್ರತಿ ವಾದ ನಡೆಯುತ್ತಿರುತ್ತದೆ. ಈ ನಡುವೆಯೂ ರೈತರು ಮಾತುಕತೆ ನಡೆಸುವ ಮೂಲಕ ಒಂದು ಒಮ್ಮತಕ್ಕೆ ಬರಬೇಕು. ಅದರಲ್ಲಿ, ಎರಡೂ ರಾಜ್ಯಗಳ ಹಿತ ಅಡಗಿದೆ ಎಂದು ತಿಳಿಸಿದ್ದಾರೆ ಎಂದರು.
`ಕರ್ನಾಟಕ ಮತ್ತು ತಮಿಳುನಾಡಿನ ಕಾಚೇರಿ ಕೊಳ್ಳದ ರೈತರು ಸೇರಿ ರಚಿಸಿಕೊಂಡಿರುವ ಕಾವೇರಿ ಕುಟುಂಬದ ಸದಸ್ಯರು ನಡೆಸಿದ ಸಭೆಗಳ ವಿವರವನ್ನು ಅವರಿಗೆ ನೀಡಿದ್ದೇನೆ. ಅದನ್ನು ಆಲಿಸಿದರು. ಈ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನಗಳಾಗಬೇಕು. ಆಗ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತದೆ' ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.