ಹುಮನಾಬಾದ್ (ಬೀದರ್ ಜಿಲ್ಲೆ): ಹುಮನಾಬಾದ್ ಸಮೀಪ ರಾಷ್ಟ್ರೀಯ ಹೆದ್ದಾರಿ 9 ರಲ್ಲಿ ಇರುವ ಬಸಂತಪುರ ಕ್ರಾಸ್ನಲ್ಲಿ ಶನಿವಾರ ಮುಂಜಾನೆ ಕಾರು ಪಲ್ಟಿಯಾಗಿ ನಿಶ್ಚಿತಾರ್ಥವಾಗಿದ್ದ ಹುಡುಗ–ಹುಡುಗಿ ಹಾಗೂ ಇವರ ತಾಯಂದಿರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಹಾರಾಷ್ಟ್ರದ ಉದಗಿರದ ಪ್ರಿಯಾಂಕಾ ನಾರಾಯಣ ನಾಗನಪಳ್ಳಿ (18), ಅನುಸೂಯಾ ಬಾಲಾಜಿ ಲೋಣಿ (55), ಸಾವಿತ್ರಿ ನಾರಾಯಣ ನಾಗನಪಳ್ಳಿ (45) ಸ್ಥಳದಲ್ಲೇ ಮೃತಪಟ್ಟರೆ, ಹಣಮಂತ ಬಾಲಾಜಿ ಲೋಣಿ (21) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಗಂಭೀರವಾಗಿ ಗಾಯಗೊಂಡಿರುವ ಸುಲೋಚನಾ ಬಾಲಾಜಿ ಬೀದರ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಿಯಾಂಕಾ ಹಾಗೂ ಹಣಮಂತ ಅವರ ನಿಶ್ಚಿತಾರ್ಥವಾಗಿತ್ತು. ಡಿಸೆಂಬರ್ 3 ಕ್ಕೆ ಮದುವೆ ನಿಗದಿಯಾಗಿತ್ತು. ಇವರೆಲ್ಲರೂ ಕಲಬುರ್ಗಿ ಜಿಲ್ಲೆಯ ಗಾಣಗಾಪುರದ ದತ್ತಾತ್ರೇಯ ದರ್ಶನ ಪಡೆದು ಊರಿಗೆ ಮರಳುತ್ತಿದ್ದಾಗ ಅವಘಡ ನಡೆದಿದೆ.
ಮತ್ತೊಂದು ಅಪಘಾತ: ಶುಕ್ರವಾರ ಮಧ್ಯರಾತ್ರಿ ಚಿಟಗುಪ್ಪ ಕ್ರಾಸ್ ಬಳಿ ಕಾರು ಮತ್ತು ಕ್ವಾಲೀಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ.
ಚಿಟಗುಪ್ಪದ ಶ್ರೀಮಂತ ಬಸವಣಪ್ಪ ಕುಂಬಾರ (65) ಹಾಗೂ ಡಾ.ಸತೀಶ ನೀಲಕಂಠಪ್ಪ (40) ಮೃತಪಟ್ಟವರು.
ಕಾರಿನಲ್ಲಿದ್ದ ಬ್ರಹ್ಮಾನಂದ ನಾಗರೆಡ್ಡಿ, ಶಿವಶಂಕರ ಹಣಮಂತರಾವ್ ಪಾಟೀಲ ಮತ್ತು ಕ್ವಾಲೀಸ್ನಲ್ಲಿದ್ದ ಹೈದರಾಬಾದ್ನ ಯೂಸೂಫ್ ಗಾಯಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.