ಮದ್ದೂರು: ತಾಲ್ಲೂಕಿನ ಬೆಳತೂರು ಗ್ರಾಮದಲ್ಲಿ ಮಂಗಳವಾರ ಆಬಲವಾಡಿಯ ರಾಹುಲ್ ದ್ರಾವಿಡ್ ಕ್ರೀಡಾಬಳಗದ ವತಿಯಿಂದ ‘ಎತ್ತಿನಗಾಡಿ ಎಳೆಯುವ ಸ್ಪರ್ಧೆ’ ಸಂಭ್ರಮದಿಂದ ನಡೆಯಿತು.
ಬಿ.ಎಚ್. ಮಂಗೇಗೌಡ ಪ್ರಥಮದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ರಾಹುಲ್ ದ್ರಾವಿಡ್ ಕ್ರೀಡಾ ಬಳಗದ ಅಧ್ಯಕ್ಷ ಅನಿಲ್ಕುಮಾರ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ಇಂದು ಆಧುನಿಕ ಕ್ರೀಡೆಗಳ ಗುಂಗಿನಲ್ಲಿ ಶಕ್ತಿ ಪ್ರದರ್ಶನದ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಗ್ರಾಮೀಣ ಜನರಲ್ಲಿ ಅಡಗಿರುವ ಕ್ರೀಡಾಪ್ರತಿಭೆಯನ್ನು ಹೊರತರುವ ನಿಟ್ಟಿನಲ್ಲಿ ಇಂತಹ ಸ್ಪರ್ಧೆಗಳನ್ನು ಬಳಗದ ವತಿಯಿಂದ ಆಯೋಜಿಸಲಾಗುತ್ತಿದೆ’ ಎಂದರು.
ಶಿಬಿರಾಧಿಕಾರಿ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಸಂತೋಷ್ ವಿಜೇತರಿಗೆ ಬಹುಮಾನ ವಿತರಿಸಿದರು. ಉಪನ್ಯಾಸಕರಾದ ಸಿದ್ದರಾಜು, ಶಿವಕುಮಾರ್ ಸೇರಿದಂತೆ ಎನ್ಎಸ್ಎಸ್ ವಿದ್ಯಾರ್ಥಿಗಳು ಹಾಜರಿದ್ದರು.
ವಿಜೇತರ ವಿವರ: ವಿದ್ಯಾರ್ಥಿ ವಿಭಾಗ- – ಅಭಿಷೇಕ್ ಗೌಡ ಮತ್ತು ಶಿವರಾಜು,(ಪ್ರಥಮ), ಪಿ. ವೆಂಕಟೇಶ್ ಹಾಗೂ ಕೆ.ಪಿ. ಸಾಧನ್ (ದ್ವಿತೀಯ). ಗ್ರಾಮಸ್ಥರ ವಿಭಾಗ: ಟಿ.ಎಸ್. ಶಿವರಾಜು ಮತ್ತು ಬಿ.ಟಿ. ನವೀನ್(ಪ್ರಥಮ), ಸಾಗರ್ ಕುಮಾರ್ ಹಾಗೂ ಶಿವಾನಂದ (ದ್ವಿತೀಯ) ಬಹುಮಾನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.