ADVERTISEMENT

ಮನೋರೋಗಿಗಳ ಪುನರ್ವಸತಿ ಕೇಂದ್ರ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 19:30 IST
Last Updated 1 ಮಾರ್ಚ್ 2014, 19:30 IST

ಬೆಂಗಳೂರು: ‘ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ­ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ಆವರಣ­ದಲ್ಲಿ ₨100 ಕೋಟಿ ವೆಚ್ಚದಲ್ಲಿ ಮಾನ­ಸಿಕ ಕಾಯಿಲೆ ಪೀಡಿತರ ಪುನರ್ವಸತಿ ಕೇಂದ್ರ  ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ಸಫಾಯಿ ಕರ್ಮಚಾರಿಗಳು ಹಾಗೂ ಅಂಗವಿಕಲ­ರಿಗಾಗಿ ರೂಪಿಸಿರುವ ‘ಸ್ವಾವಲಂಬನ’ ಯೋಜನೆಗೆ ಶನಿವಾರ ಇಲ್ಲಿ ಚಾಲನೆ ನೀಡಿ ಮಾತನಾಡಿದರು.

‘ಮಾನಸಿಕ ಕಾಯಿಲೆಗಳಿಂದ ನರಳು­ತ್ತಿ­ರು­ವವರನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳಲು ಇಂಥ ಕೇಂದ್ರದ ಅಗತ್ಯ­ವಿದೆ’ ಎಂದು ಮಾಹಿತಿ ನೀಡಿದರು.
‘ಮೊದಲ ಹಂತದಲ್ಲಿ ಸುಮಾರು ₨25 ಕೋಟಿ ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಇದಕ್ಕೆ ರಾಜ್ಯ ಸರ್ಕಾರದ ಸಹಕಾರ ಪಡೆಯ­ಲಿದ್ದೇವೆ’ ಎಂದು ಹೇಳಿದರು.

‘ಅಂಗವಿಕಲರೆಂದು ಗುರುತಿಸಲು  ಏಳು ಅಂಗವೈಕಲ್ಯದ ನ್ಯೂನತೆಗಳ ಜತೆ­ಯಲ್ಲಿ ಹೆಚ್ಚುವರಿಯಾಗಿ 12 ನ್ಯೂನತೆ­ಗಳನ್ನು ಸೇರ್ಪಡೆಗೊಳಿಸಲಾಗಿದೆ. ಅಂಗ­ವಿಕಲರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಹೆಚ್ಚಿನ ಪ್ರಚಾರ ನಡೆಯಬೇಕಿದೆ’ ಎಂದು ತಿಳಿಸಿದರು.

‘ಅಂಗವಿಕಲರು ಸಹಾಯಧನವನ್ನು ಪಡೆಯಲು ₨6,500 ಇದ್ದ ಆದಾ­ಯದ ಮಿತಿಯನ್ನು, ₨ 20 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ದೇಶ­ದಲ್ಲಿ ಇದೇ ಮೊದಲ ಬಾರಿಗೆ ಸ್ವಾವಲಂ­ಬನಾ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ’ ಎಂದು ತಿಳಿಸಿದರು.

ರಾಜ್ಯದಲ್ಲಿ 302 ಸಫಾಯಿ ಕರ್ಮಚಾರಿಗಳು!: ‘ಎಷ್ಟೇ ಕಾನೂನು­ಗಳನ್ನು ತಂದರೂ ರಾಜ್ಯದಲ್ಲಿ ಮಲ ಹೊರು­ವವರು ಇನ್ನೂ  ಇದ್ದಾರೆ. ಪ್ರಸ್ತುತ ನಡೆದ ಸಮೀಕ್ಷೆಯಲ್ಲಿ 302 ಮಂದಿ ಮಲ ಹೊರು­ವ­­ವರನ್ನು ಗುರುತಿಸಲಾಗಿದ್ದು, ಈ ಪ್ರತಿಯೊಬ್ಬರಿಗೂ ₨ 40 ಸಾವಿರ ಸಹಾಯ ಧನ ಒದಗಿ­ಸ­ಲಾಗುವುದು. ಮಲ ಹೊರುವ ಪದ್ದತಿಯನ್ನು ಕೈ ಬಿಟ್ಟು, ಅವರು ಹೊಸ ಉದ್ಯೋಗವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಸಹಾಯಧನ ನೀಡ­ಲಾಗುತ್ತದೆ’ ಎಂದರು.

ಬೆಂಗಳೂರಿನಲ್ಲಿಯೇ 200  ಮಂದಿ: ಬಿಬಿಎಂಪಿ ಆಯುಕ್ತ ಲಕ್ಷ್ಮಿನಾರಾಯಣ, ‘ಬೆಂಗಳೂರು ನಗರದಲ್ಲಿ ಮಲ ಹೊರುವ 200 ಕಾರ್ಮಿಕರನ್ನು ಗುರುತಿಸ­ಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.