ADVERTISEMENT

ಮಹಾರಾಷ್ಟ್ರ ಗೃಹ ಸಚಿವ ಪಾಟೀಲ್ ವಿರುದ್ಧ ದೂರು

ಬೆಳಗಾವಿಯಲ್ಲಿ ಪ್ರಚೋದನಕಾರಿ ಭಾಷಣ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 19:59 IST
Last Updated 10 ಏಪ್ರಿಲ್ 2013, 19:59 IST

ಬೆಳಗಾವಿ: ಇಲ್ಲಿ ಈಚೆಗೆ ಪ್ರಚೋದನಕಾರಿ ಭಾಷಣ ಮಾಡಿದ್ದ ಮಹಾರಾಷ್ಟ್ರ ಗೃಹ ಸಚಿವ ಆರ್.ಆರ್. ಪಾಟೀಲ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಾಗಿದೆ.

ಎರಡು ಭಾಷಿಕರ ನಡುವೆ ವೈಷಮ್ಯ ಬೆಳೆಸಿದ ಆರೋಪದಡಿ ದೂರು ದಾಖಲಾಗಿದೆ.

ಏ. 7ರಂದು ಪತ್ರಕರ್ತ ಕಿರಣ ಠಾಕೂರ ಜನ್ಮದಿನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಆರ್.ಆರ್. ಪಾಟೀಲ, `ಬೆಳಗಾವಿ ಜಿಲ್ಲೆಯಲ್ಲಿ ಎಂಇಎಸ್‌ನ ಐವರು ಶಾಸಕರಾದರೆ ಕರ್ನಾಟಕ ಸರ್ಕಾರವೇ ನಮ್ಮ ಕಾಲ ಬಳಿ ಬರಲಿದೆ. ಆಗ ಕರ್ನಾಟಕ ಸರ್ಕಾರವನ್ನು ಕೈ ಬೆರಳ ತುದಿಯಲ್ಲಿ ಕುಣಿಸಬಹುದು' ಎಂದು ವಿವಾದಾತ್ಮಕ ಭಾಷಣ ಮಾಡಿದ್ದರು.

ಪಾಟೀಲರು ಸುಮಾರು 45 ನಿಮಿಷ ಮಾಡಿದ ಭಾಷಣದಲ್ಲಿ 26 ನಿಮಿಷಗಳ ಕಾಲ ಭಾಷೆಗಳ ನಡವೆ ಸಾಮರಸ್ಯ ಕದಡುವಂತಹ ಅಂಶಗಳಿದ್ದವು ಎಂದು ದೂರಿನಲ್ಲಿ ತಿಳಿಸಲಾಗಿದೆ.

`ಆರ್. ಆರ್. ಪಾಟೀಲರ ಭಾಷಣದ ವಿಡಿಯೊ ದೃಶ್ಯಾವಳಿಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಎರಡು ಭಾಷಿಕರ ನಡುವೆ ವೈಷಮ್ಯ ಬೆಳೆಸುವಂತಹ ಪ್ರಚೋದನಕಾರಿ ಹೇಳಿಕೆ ನೀಡಿ ಕಾನೂನು ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. ಅವರ ಭಾಷಣದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ' ಎಂದು ಜಿಲ್ಲಾಧಿಕಾರಿ ಮುನಿಷ್ ಮೌದ್ಗಿಲ್ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.