ADVERTISEMENT

ಮಾನೆ ಕುಟುಂಬಕ್ಕೆ ರೂ.15 ಲಕ್ಷ, ಒಬ್ಬನಿಗೆ ನೌಕರಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST

ಬೆಳ್ತಂಗಡಿ: ನಕ್ಸಲರ ಜತೆ ಶನಿವಾರ ತಡರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಸಾವಿಗೀಡಾದ ಎಎನ್‌ಎಫ್ ಸಿಬ್ಬಂದಿ ಮಹಾದೇವ ಮಾನೆ ಕುಟುಂಬಕ್ಕೆ ತಕ್ಷಣ ರೂ. 10 ಲಕ್ಷ ಪರಿಹಾರ ಮತ್ತು ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ನೌಕರಿ ಹಾಗೂ ವಸತಿ ಸೌಕರ್ಯ ನೀಡಲಾಗುವುದು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ನೀಲಂ ಅಚ್ಯುತ ರಾವ್ ತಿಳಿಸಿದರು.

ಮಾನೆ ಮೃತದೇಹಕ್ಕೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಭಾನುವಾರ ಅಂತಿಮ ನಮನ ಸಲ್ಲಿಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಎಡಿಜಿಪಿ ಬಿಪಿನ್ ಗೋಪಾಲಕೃಷ್ಣ ಮಾತನಾಡಿ, ಜನರಿಗೆ ಭದ್ರತೆ ಮತ್ತು ರಕ್ಷಣೆ ಒದಗಿಸಲಿಕ್ಕಾಗಿ 15 ಕಡೆಗಳಲ್ಲಿ ಶಾಶ್ವತ ನಕ್ಸಲ್ ನಿಗ್ರಹ ಪಡೆ ತಕ್ಷಣ ನಿಯೋಜಿಸಲಾಗುವುದು. ಅವರ ದಿನಭತ್ಯೆಯನ್ನು ರೂ. 300ರಿಂದ 1,000ಕ್ಕೆ ಏರಿಸಲಾಗುವುದು. ಶೇ. 50ರಷ್ಟು ಸೌಕರ್ಯ ಹೆಚ್ಚಿಸಲಾಗುವುದು. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಒಪ್ಪಿಗೆಯೂ ಸಿಕ್ಕಿದೆ ಎಂದರು.

ಮಾನೆ ದೇಹಕ್ಕೆ ಒಂದು ಗುಂಡು ಒಳಹೊಕ್ಕಿದ್ದು ಪತ್ತೆಯಾಗಿದೆ. ಆದರೆ ಅದು ಹೊರಬಂದ ಕುರಿತು ಮಾಹಿತಿ ಇಲ್ಲ. ಹಾಗಾಗಿ ಮತ್ತೊಮ್ಮೆ ದೇಹದ ಎಕ್ಸ್‌ರೇ ತೆಗೆಯಲಾಗುವುದು. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ತಜ್ಞರು ವಿಶೇಷ ತಪಾಸಣೆ ಮತ್ತು ಪರಿಶೀಲನೆ ನಡೆಸಲಿದ್ದಾರೆ ಎಂದರು.

ಬೆಂಗಳೂರು ವರದಿ: ಮಾನೆ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ ರೂ 10 ಲಕ್ಷ ಪರಿಹಾರ ನೀಡುವ ಜೊತೆಯಲ್ಲೇ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ರೂ 5 ಲಕ್ಷ ನೀಡುವುಗಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.