ಶಿರಸಿ (ಉ.ಕ.ಜಿಲ್ಲೆ): ನಾಡಿನ ಜಾಗೃತ ಶಕ್ತಿಪೀಠಗಳಲ್ಲಿ ಒಂದಾದ ಇಲ್ಲಿನ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವವು ಮಂಗಳವಾರ (ಮಾ.11)ದಿಂದ ವಿಧ್ಯುಕ್ತವಾಗಿ ಪ್ರಾರಂಭ-ವಾಗಲಿದೆ.
ಮಾರಿ ಜಾತ್ರೆ ಎಂದಾಕ್ಷಣ ಪ್ರಾಣಿಬಲಿ ನೀಡುವ ಭಯಾನಕ ದೃಶ್ಯ ಮನದಲ್ಲಿ ಮೂಡುತ್ತದೆ. ಆದರೆ ಈ ಜಾತ್ರೆಯಲ್ಲಿ ಪ್ರಾಣಿ ಬಲಿ ಸಂಪೂರ್ಣ ನಿಷಿದ್ಧ. ಜಾತ್ರೆಯ ಹೆಸರಿನಲ್ಲಿ ಕೋಣ, ಕುರಿ, ಕೋಳಿಯ ನೆತ್ತರು ಹರಿಸುವ ಪದ್ಧತಿ ಇಲ್ಲದಿರುವುದೇ ಇಲ್ಲಿನ ವಿಶೇಷತೆ. ಮಾರಿಕಾಂಬೆಯ ಪತಿ ಮಹಿಷಾಸುರನ ಪ್ರತೀಕವಾಗಿರುವ ಪಟ್ಟದ ಕೋಣವನ್ನು ಪೂಜಿಸಿ, ಆರಾಧಿಸುವ ಸಂಪ್ರದಾಯ ಇಲ್ಲಿ ಆಚರಣೆಯಲ್ಲಿದೆ.
ಈ ಸಂದರ್ಭದಲ್ಲಿ ಪ್ರಾಣಿ ಬಲಿಯ ಬದಲಾಗಿ ಸಾತ್ವಿಕ ಸ್ವರೂಪದ ಬೂದುಗುಂಬಳ ಕಾಯಿಯನ್ನು ಬಲಿ ಕೊಡಲಾಗುತ್ತದೆ.
ಮಾರಿಕಾಂಬಾ ಜಾತ್ರೆ ಈ ಬಾರಿ ಇದೇ 11ರಿಂದ 19ರ ವರೆಗೆ ನಡೆಯಲಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ರಾಜ್ಯದ ಜನರು ಮಾತ್ರವಲ್ಲದೆ ಗೋವಾ, ಮಹಾರಾಷ್ಟ್ರ, ಕೇರಳಗಳಿಂದ ಭಕ್ತರು ಬರುತ್ತಾರೆ.
ಬುಧವಾರ ನಸುಕು ಹರಿಯುತ್ತಲೇ ಬಿಡಕಿಬೈಲಿನ ಜಾತ್ರಾ ಗದ್ದುಗೆಗೆ ಶೋಭಾಯಾತ್ರೆಯಲ್ಲಿ ಸಾಗುವ ದೇವಿಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನ ಸೇರುತ್ತಾರೆ. ಗುರುವಾರ ಬೆಳಿಗ್ಗೆಯಿಂದ ಹಣ್ಣು–ಕಾಯಿ ಸೇವೆ, ಹರಕೆ, ತುಲಾಭಾರ, ಬೇವಿನ ಉಡುಗೆ ಸೇವೆಗಳು ಪ್ರಾರಂಭವಾಗಿ ಇದೇ 18ರ ತನಕ ನಡೆಯುತ್ತವೆ. ರಥದಲ್ಲಿ ಆಗಮಿಸುವ ದೇವಿ 19ರಂದು ಅಟ್ಟಲಿನಲ್ಲಿ ಮರಳುವ ಮೂಲಕ ಜಾತ್ರೆಗೆ ಸಂಭ್ರಮದ ತೆರೆ ಬೀಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.