ADVERTISEMENT

ಮುಂಗಾರು ಅಧಿವೇಶನದಲ್ಲಿ 5 ಮಸೂದೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2011, 19:00 IST
Last Updated 22 ಏಪ್ರಿಲ್ 2011, 19:00 IST

ಮೈಸೂರು: ’ಎಲ್ಲರಿಗೂ ನ್ಯಾಯ ಸಿಗಬೇಕು, ನ್ಯಾಯಾಧೀಶರ ನೇಮಕಾತಿ ಪಾರದರ್ಶಕವಾಗಿರಬೇಕು, ಸಾರ್ವಜನಿಕ ಹಿತಾಸಕ್ತಿ ಅರ್ಜಿಯ  ದುರ್ಬಳಕೆಯನ್ನು ತಪ್ಪಿಸಬೇಕು ಎನ್ನುವುದು ಸೇರಿದಂತೆ ಪ್ರಮುಖ ಐದು ಮಸೂದೆಗಳನ್ನು ಮುಂದಿನ ಮಳೆಗಾಲದ ಅಧಿವೇಶನದಲ್ಲಿ ಸಂಸತ್ ನಲ್ಲಿ ಮಂಡಿಸಲಾಗುವುದು’ ಎಂದು ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ಶುಕ್ರವಾರ ಹೇಳಿದರು.

ನಗರದ ಕಲಾಮಂದಿರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಆಶ್ರಯದಲ್ಲಿ ಏರ್ಪಡಿಸಿದ್ದ ’ದಕ್ಷಿಣ ರಾಜ್ಯ ವಕೀಲರು ಮತ್ತು ಮಾನವ ಹಕ್ಕು ಪ್ರತಿನಿಧಿಗಳ ಸಮಾವೇಶ’ವನ್ನು ಉದ್ಘಾಟಿಸಿ ಮಾತನಾಡಿದರು.

’ಸಮೀಕ್ಷೆಯೊಂದರ ಪ್ರಕಾರ ದೇಶದಲ್ಲಿ ನೂರಕ್ಕೆ ಕೇವಲ 4 ಮಂದಿಗೆ ಮಾತ್ರ ನ್ಯಾಯ ಸಿಗುತ್ತಿದೆ. ಉಳಿದ 96 ಮಂದಿ ನ್ಯಾಯದಿಂದ  ವಂಚಿತರಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಇದು ಎಷ್ಟು ಸತ್ಯ ಎನ್ನುವುದು ಗೊತ್ತಿಲ್ಲ. ಆದರೆ ಎಲ್ಲರಿಗೂ ನ್ಯಾಯ ದೊರಕುವಂತೆ ಮಾಡ ಲಾಗುವುದು. ನ್ಯಾಯಾಧೀಶರ ನೇಮಕಾತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಮೂಲಕ ಭ್ರಷ್ಟಾಚಾರವನ್ನು ನಿಯಂತ್ರಿಸಲಾಗುವುದು. 

ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ದೊಡ್ಡ ವ್ಯವಹಾರವಾಗಿದೆ. ಕೆಲವರು ಬ್ಲಾಕ್‌ಮೇಲ್ ಮಾಡಲು ಬಳಕೆ ಮಾಡುತ್ತಿದ್ದಾರೆ. ಆದ್ದರಿಂದ ಇದನ್ನು ಸರಿದಾರಿಗೆ ತರುವ ಕೆಲಸವೂ ಆಗಬೇಕಿದೆ. ಈ ಸಂಬಂಧವಾಗಿ ಮಸೂದೆಯನ್ನು ಮಂಡಿಸಲಾಗುವುದು’ ಎಂದು  ತಿಳಿಸಿದರು.

 ’ಇನ್ನು ಮೂರು ವರ್ಷಗಳಲ್ಲಿ ದೇಶದಲ್ಲಿ ಒಂದೇ ಒಂದು ಪ್ರಕರಣ ಕೂಡ ಬಾಕಿ ಇರದಂತೆ ವಿಲೇವಾರಿ ಮಾಡಲು ಯೋಜನೆ ಸಿದ್ಧಪಡಿಸಲಾಗಿದೆ. ಈ ಸಂಬಂಧವಾಗಿ ಮುಖ್ಯ ನ್ಯಾಯಾಧೀಶರಿಗೆ ಶೀಘ್ರದಲ್ಲಿಯೇ ಪತ್ರ ಬರೆಯುತ್ತಿದ್ದೇನೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ’ ಎಂದು ಹೇಳಿದರು.

ಬಿಜೆಪಿ ವಿರುದ್ಧ ವಾಗ್ದಾಳಿ:ಮುಖ್ಯ ಅತಿಥಿಯಾಗಿದ್ದ ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರ ಡಾ.ಅಭಿಷೇಕ್ ಸಿಂಘಿ ್ವ ಮಾತನಾಡಿ, ’ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾ ಚಾರದಲ್ಲಿ ಮುಳುಗಿದೆ’ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದರು.

ಕೆಪಿಸಿಸಿಯ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಅಧ್ಯಕ್ಷ ಸಿ.ಎಂ.ಧನಂಜಯ ಪ್ರಾಸ್ತಾವಿಕವಾಗಿ ಮಾತನಾಡಿ, ಬೆಂಗಳೂರಿನಲ್ಲಿ ಸುಪ್ರೀಂಕೋರ್ಟ್ ಪೀಠ ಸ್ಥಾಪನೆ, ವಕೀಲರ ಕ್ಷೇಮಾಭಿವೃದ್ಧಿ ನಿಧಿಗೆ ಕನಿಷ್ಠ ಐದು ಕೋಟಿ ಧನ ಸಹಾಯ ಹಾಗೂ ಮೇಲ್ಮನೆಯಲ್ಲಿ ವಕೀಲರಿಗಾಗಿ ವಕೀಲರ ಕ್ಷೇತ್ರವನ್ನು ಕಾಯ್ದಿರಿಸಬೇಕು ಎನ್ನುವುದು ಸೇರಿದಂತೆ ಒಟ್ಟು ಏಳು ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.