ಬೆಂಗಳೂರು: ಇದೇ 31 ರಂದು ರಾಜ್ಯ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ವಯೋ ನಿವೃತ್ತಿಯಾಗಲಿದ್ದು, ಈ ಹುದ್ದೆಯನ್ನು ಯಾರು ಅಲಂಕರಿಸಲಿದ್ದಾರೆ ಎಂಬ ಕುತೂಹಲ ಸರ್ಕಾರಿ ನೌಕರರಲ್ಲಿ ಮೂಡಿದೆ.
ರತ್ನಪ್ರಭಾ ಸೇವಾವಧಿಯನ್ನು ಮುಂದಿನ ಮೂರು ತಿಂಗಳು ವಿಸ್ತರಿಸುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ
(ಡಿಒಪಿಟಿ) ಶಿಫಾರಸು ಮಾಡಿದೆ.
ರಾಜ್ಯ ಸರ್ಕಾರ ಕಳುಹಿಸಿದ ಶಿಫಾರಸನ್ನು ಚುನಾವಣಾ ಆಯೋಗದ ಒಪ್ಪಿಗೆ ಮೇರೆಗೆ ಡಿಒಪಿಟಿ ಅನುಮೋದಿಸಬಹುದು. ಆದರೆ, ಬುಧವಾರ ಸಂಜೆಯವರೆಗೆ ಈ ಕುರಿತ ನಿರ್ದೇಶನ ಡಿಒಪಿಟಿಯಿಂದ ರಾಜ್ಯ ಸರ್ಕಾರಕ್ಕೆ ಬಂದಿಲ್ಲ.
ಗುರುವಾರದಿಂದ ಭಾನುವಾರದವರೆಗೆ ಕೇಂದ್ರ ಸರ್ಕಾರದ ಕಚೇರಿಗಳಿಗೆ ರಜಾದಿನಗಳಾಗಿವೆ. ಆದರೆ, ಶನಿವಾರ ರಾಜ್ಯದಲ್ಲಿ ಸರ್ಕಾರಿ ರಜೆ ಇಲ್ಲ. ಅಂದು ಮಧ್ಯಾಹ್ನ ಮೂರುಗಂಟೆಯೊಳಗೆ ಡಿಒಪಿಟಿಯಿಂದ ಯಾವುದೇ ನಿರ್ದೇಶನ ಬರದಿದ್ದರೆ ರತ್ನಪ್ರಭಾ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ಗೆ ಪ್ರಭಾರ ಜವಾಬ್ದಾರಿಯನ್ನು ವಹಿಸಿ, ಕರ್ತವ್ಯದಿಂದ ನಿರ್ಗಮಿಸಬೇಕಾಗುತ್ತದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.