ADVERTISEMENT

ಮುಜುಗರ ಆಗದಂತೆ ಸಭೆ: ಪ್ರಹ್ಲಾದ ಜೋಷಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 19:30 IST
Last Updated 24 ಅಕ್ಟೋಬರ್ 2011, 19:30 IST

ಬೆಂಗಳೂರು: ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಸಭೆ ಎಲ್. ಕೆ. ಅಡ್ವಾಣಿ ಅವರಿಗೆ ಯಾವುದೇ ಮುಜುಗರ ತಾರದಂತೆ ನಡೆಯಲಿದೆ ಎಂದು ಸಂಸದ ಪ್ರಹ್ಲಾದ ಜೋಷಿ ಹೇಳಿದರು.

`ಜಗನ್ನಾಥ ಭವನ~ದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಸಾರ್ವಜನಿಕ ಸಭೆಯಲ್ಲಿ ಅಡ್ವಾಣಿ ಅವರ ಜೊತೆ ಯಾರು ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂಬ ಕುರಿತು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ~ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

`ಅಡ್ವಾಣಿಯವರ ಬೆಂಗಳೂರಿನ ಸಮಾವೇಶ ರದ್ದಾಗಿದೆ ಎಂಬ ಸುದ್ದಿ ಶನಿವಾರ ಹೇಗೆ ಹರಡಿತು ಎಂಬುದೇ ತಿಳಿಯುತ್ತಿಲ್ಲ. ಈ ಸುದ್ದಿ ಹಬ್ಬಿದ ವಿಚಾರವಾಗಿ ನಾನು ಪಕ್ಷದ ಅಧ್ಯಕ್ಷರೂ ಸೇರಿದಂತೆ ಹಲವು ಮುಖಂಡರಲ್ಲಿ ವಿಚಾರಿಸಿದೆ. ಆದರೆ ಅವರಿಗೂ ಇದು ಹೇಗಾಯಿತು ಎಂಬುದು ತಿಳಿಯುತ್ತಿಲ್ಲ~ ಎಂದರು.

ಸಮಾವೇಶದಲ್ಲಿ ಸುಮಾರು 40 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಯಾತ್ರೆ ಸಾಗುವ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡಗಳಲ್ಲಿ ಅಡ್ವಾಣಿಯವರ ರಥದ ಮಾದರಿಯಲ್ಲೇ ಚಿಕ್ಕ ರಥಗಳನ್ನು ಸಿದ್ಧಪಡಿಸಲಾಗಿದೆ.

ಈ ರಥಗಳು ಆಯಾ ಜಿಲ್ಲೆಗಳ ತಾಲ್ಲೂಕು ಕೇಂದ್ರಗಳತ್ತ ಸಾಗಿ ಭ್ರಷ್ಟಾಚಾರ ರಹಿತ ರಾಜಕಾರಣದ ಕುರಿತು ಸಂದೇಶ ಸಾರಲಿವೆ ಎಂದರು. ಸಚಿವ ಅಶೋಕ ಅವರು ಸೋಮವಾರದ ಯಾವುದೇ ಸಭೆಯಲ್ಲಿ ಪಾಲ್ಗೊಳ್ಳದಿರುವುದಕ್ಕೆ ತಮಗೆ ಕಾರಣ ತಿಳಿದಿಲ್ಲ ಎಂದರು. ಯಾತ್ರೆಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಉಸ್ತುವಾರಿಯನ್ನು ಶಾಸಕ ಸಿ.ಟಿ. ರವಿ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿಯನ್ನು ಎಂ. ಭಾನುಪ್ರಕಾಶ್ ಅವರಿಗೆ ವಹಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.