ADVERTISEMENT

ಮೈಸೂರು ಥಿಯೇಟರ್‌ನಲ್ಲಿ ದಾಂದಲೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 19:59 IST
Last Updated 20 ಡಿಸೆಂಬರ್ 2012, 19:59 IST
ಮೈಸೂರು: ನಗರದ ಸಂಗಮ್ ಚಿತ್ರಮಂದಿರದಲ್ಲಿ ಗುರುವಾರ ನಟ ಪುನೀತ್ ರಾಜ್‌ಕುಮಾರ್ ಅಭಿನಯದ `ಯಾರೇ ಕೂಗಾಡಲಿ' ಸಿನಿಮಾದ ಬೆಳಗಿನ ಪ್ರದರ್ಶನದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಭಿಮಾನಿಗಳು ಕಲ್ಲು ತೂರಿ ದಾಂದಲೆ ನಡೆಸಿದರು.
 
ಪ್ರದರ್ಶನ ನಡೆಯುವಾಗ ತಾಂತ್ರಿಕ ದೋಷ ಕಾಣಿಸಿಕೊಂಡು ಧ್ವನಿ ಕೇಳಿಬರಲಿಲ್ಲ. ಚಿತ್ರಮಂದಿರದಲ್ಲಿ ಶಿಳ್ಳೆ- ಕೇಕೆ ಮೊಳಗಿತು. 15 ನಿಮಿಷಗಳಾದರೂ ಸಿನಿಮಾದಲ್ಲಿ ಧ್ವನಿ ಸರಿ ಹೋಗದಿದ್ದುದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಕಲ್ಲು ತೂರಿ, ಸೀಟುಗಳನ್ನು ಹರಿದು ಹಾಕಿದರು. ಕಲ್ಲು ತೂರಾಟದಿಂದ ಚಿತ್ರಮಂದಿರದ ಮುಂಭಾಗದ ಗಾಜುಗಳು ಪುಡಿಯಾದವು. 
 
ಮುಂಜಾಗ್ರತಾ ಕ್ರಮವಾಗಿ ಚಿತ್ರಪ್ರದರ್ಶನ ಸ್ಥಗಿತಗೊಳಿಸಲಾಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು, ಪ್ರೇಕ್ಷಕರು ಮತ್ತು ಅಭಿಮಾನಿಗಳನ್ನು ಹೊರಗೆ ಕಳುಹಿಸಲು ಹರಸಾಹಸಪಟ್ಟರು. ಕೆಲವರು ಆಡಳಿತ ಮಂಡಳಿ ವಿರುದ್ಧ ಹರಿಹಾಯ್ದು ತರಾಟೆಗೆ ತೆಗೆದುಕೊಂಡರು. 
 
`ಉಪಗ್ರಹ ಮೂಲಕ ಚಿತ್ರ ಪ್ರಸಾರ ಮಾಡುತ್ತ್ದ್ದಿದುದರಿಂದ ತಾಂತ್ರಿಕ ದೋಷ ಉಂಟಾಗಿ ಧ್ವನಿ ಕೇಳಿಬರಲಿಲ್ಲ. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಗಲಾಟೆ ಮಾಡಿದ್ದಾರೆ. ಸಹನೆ ಕಳೆದುಕೊಂಡ ಪ್ರೇಕ್ಷಕರ ಮನವೊಲಿಸಲು ಸಾಧ್ಯವಾಗಲಿಲ್ಲ. ತಾಂತ್ರಿಕ ದೋಷದಿಂದಾಗಿ ದಿನದ ನಾಲ್ಕು ಪ್ರದರ್ಶನಗಳನ್ನು ರದ್ದುಗೊಳಿಸಲಾಯಿತು. ಟಿಕೆಟ್ ಹೊಂದಿರುವವರಿಗೆ ಶುಕ್ರವಾರ ಪ್ರದರ್ಶನ ವೀಕ್ಷಿಸಲು ಅವಕಾಶ ಮಾಡಿಕೊಡಲಾಗುವುದು' ಎಂದು ಚಿತ್ರಮಂದಿರ ವ್ಯವಸ್ಥಾಪಕ ರವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.