
ವಿಜಯಪುರ: ‘ಪ್ರಧಾನಮಂತ್ರಿ ನರೇಂದ್ರ ಮೋದಿ ರೈತ ವಿರೋಧಿ’ ಎಂದು ನರ್ಮದಾ ಬಚಾವೋ ಆಂದೋಲನದ ರೂವಾರಿ ಮೇಧಾ ಪಾಟ್ಕರ್ ಬುಧವಾರ ಇಲ್ಲಿ ವಾಗ್ದಾಳಿ ನಡೆಸಿದರು. ‘ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಜಾರಿಗೊಳಿಸಲು ಚಿಂತನೆ ನಡೆಸಿದ ನೂತನ ಭೂ- ಸ್ವಾಧೀನ ಕಾಯ್ದೆ ತಿದ್ದುಪಡಿ ಮಸೂದೆಯಿಂದಲೇ ಎನ್ಡಿಎ ಸರ್ಕಾರದ ರೈತ ವಿರೋಧಿ ನೀತಿ ಬೆಳಕಿಗೆ ಬಂತು. ಪ್ರಧಾನಿ ಕೇವಲ ಕಾರ್ಪೊರೇಟ್ ವಲಯದ ಪರವಾಗಿದ್ದಾರೆ.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಐಟಿ-–ಬಿಟಿ, ಖಾಸಗಿ ವಿಮಾ ಕಂಪೆನಿಗಳಿಗೆ ಲಾಭ ತಂದುಕೊಡುವ ಯೋಜನೆಯಾಗಿದೆ. ನದಿಗಳ ಜೋಡಣೆ ಯೋಜನೆ ಸಹ ಹಣ ಲೂಟಿ ಹೊಡೆಯುವ ಯೋಜನೆಯಾಗಿದ್ದು, ಇದು ಕಡತದಲ್ಲಿ ಮಾತ್ರ ಇರುತ್ತದೆ’ ಎಂದು ತಿಳಿಸಿದರು. ಮಹಾದಾಯಿ ವಿವಾದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಮೋದಿ ಅವರಿಗೆ ರೈತರ ಹಿತರಕ್ಷಣೆ ಬೇಕಿಲ್ಲ. ಹೀಗಾಗಿ ಜಲ ವಿವಾದ ಬಗೆಹರಿಸುವುದಕ್ಕಾಗಿ ಮಧ್ಯಸ್ಥಿಕೆ ವಹಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿಲ್ಲ’ ಎಂದರು.
‘ಆಲಮಟ್ಟಿ ಅಣೆಕಟ್ಟೆಯ ಎತ್ತರ ಹೆಚ್ಚಳಕ್ಕೆ ನನ್ನ ವಿರೋಧವಿದೆ. ಇದರಿಂದ ಸಹಸ್ರ, ಸಹಸ್ರ ಕುಟುಂಬಗಳ ಬದುಕು ಬೀದಿಪಾಲಾಗಲಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಯಾವ ಸಂಸ್ಕೃತಿ?: ‘ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ವಿದ್ಯಾರ್ಥಿಗಳನ್ನು ರಾಷ್ಟ್ರದ್ರೋಹದ ಆಪಾದನೆ ಮೇಲೆ ಜೈಲಿಗೆ ಅಟ್ಟುವುದು ಯಾವ ಸಂಸ್ಕೃತಿ’ ಎಂದು ಅವರು ಪ್ರಶ್ನಿಸಿದರು. ‘ಗಲ್ಲು ಶಿಕ್ಷೆಯನ್ನು ನಾನು ಮೊದಲಿನಿಂದಲೂ ವಿರೋಧಿಸುತ್ತಿದ್ದೇನೆ. ಅಪರಾಧಿ ಯಾರಾದರೂ ಆಗಿರಲಿ. ಗಲ್ಲು ಶಿಕ್ಷೆ ವಿಧಿಸುವುದು ಬೇಡ. ಅಫ್ಜಲ್ ಗುರು ಕುರಿತು ಪಿಡಿಪಿ, ಬಿಜೆಪಿ ಮುಖಂಡರನ್ನೇ ಪ್ರಶ್ನಿಸಿ’ ಎಂದರು.
ದಿಟ್ಟತನ ಪ್ರದರ್ಶಿಸಲಿ: ‘ಯಮುನಾ ನದಿ ತಟದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡುವ ಅಗತ್ಯವಿರಲಿಲ್ಲ. ಈಗಾಗಲೇ ನದಿ ಕಲುಷಿತವಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಿರುವ ಆರ್ಟ್ ಆಫ್ ಲಿವಿಂಗ್ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಕ್ರಮಕ್ಕೆ ಆದೇಶ ನೀಡುವ ಮೂಲಕ ದಿಟ್ಟತನ ಪ್ರದರ್ಶಿಸಬೇಕು’ ಎಂದು ಅಭಿಪ್ರಾಯಪಟ್ಟರು.
***
ತ್ರಯಂಬಕೇಶ್ವರ ದೇಗುಲದಲ್ಲಿ ಮಹಿಳೆಯರ ಪ್ರವೇಶ ನಿಷೇಧಿಸಿದ್ದು ತಪ್ಪು. ಎಲ್ಲೆಡೆ ಸಮಾನ ಅವಕಾಶ, ನ್ಯಾಯ ಇರಬೇಕು. ಎಲ್ಲ ದೇಗುಲಗಳಿಗೂ ಮಹಿಳೆಯರಿಗೆ ಮುಕ್ತ ಪ್ರವೇಶಾವಕಾಶ ಇರಬೇಕು.
-ಮೇಧಾ ಪಾಟ್ಕರ್,
ಪರಿಸರ ಕಾರ್ಯಕರ್ತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.