ADVERTISEMENT

ಯಕ್ಷಗಾನ ಕಲಾವಿದ ಕುಂಜಾಲು ರಾಮಕೃಷ್ಣ ನಿಧನ

​ಪ್ರಜಾವಾಣಿ ವಾರ್ತೆ
Published 13 ಜೂನ್ 2014, 19:30 IST
Last Updated 13 ಜೂನ್ 2014, 19:30 IST

ಬ್ರಹ್ಮಾವರ (ಉಡುಪಿ ಜಿಲ್ಲೆ): ಬಡಗು­ತಿಟ್ಟು ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ ಕುಂಜಾಲು ರಾಮಕೃಷ್ಣ (68) ಅಸೌಖ್ಯದಿಂದ ಶುಕ್ರವಾರ ಇಲ್ಲಿನ ಕುಂಜಾ­ಲಿನ ಸ್ವಗೃಹದಲ್ಲಿ ನಿಧನ­ರಾದರು. ಅವರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.

1೫ನೇ ವಯಸ್ಸಿಗೇ ಯಕ್ಷ­ಗಾನ ರಂಗವ­ನ್ನೇರಿದ ರಾಮಕೃಷ್ಣ ಅವರು 40 ವರ್ಷ ಪ್ರೇಕ್ಷಕರನ್ನು ನಗಿಸು­ತ್ತಲೇ ಕಲಾ ಪೋಷಣೆ ಮಾಡಿದ್ದರು. ಕೊಲ್ಲೂರು, ಮಾರಣಕಟ್ಟೆ, ಅಮೃತೇ­ಶ್ವರಿ, ಸಾಲಿಗ್ರಾಮ, ಇಡಗುಂಜಿ, ಶಿರಸಿ ಮುಂತಾದ ಮೇಳಗಳಲ್ಲಿ ಪ್ರಧಾನ ಹಾಸ್ಯ­ಗಾರರಾಗಿ ಜನಪ್ರಿಯತೆ  ಪಡೆದಿ­ದ್ದರು. ಕಾಶಿಮಾಣಿ, ವಿಡೂರಥ, ಬೇಹಿನ ಚರ, ವಿಲಕ್ಷಣ, ದಾಸರಾಜ ಕಂದರ, ಬ್ರಾಹ್ಮಣ, ಪ್ರಹ್ಲಾದ ಚರಿತ್ರೆಯ ದಡ್ಡ, ವನಪಾಲಕಿ, ಶ್ವೇತಕುಮಾರ ಚರಿತ್ರೆಯ ಪ್ರೇತ, ನಳ ದಮಯಂತಿಯ ಬಾಹುಕ, ದ್ವಾರಪಾಲಕ, ನಕ್ಷತ್ರಕ ಮುಂತಾದ ಪಾತ್ರ­ಗಳು ಅವರಿಗೆ ಹೆಸರು ತಂದು­ಕೊಟ್ಟಿದ್ದವು.

ಕರ್ನಾಟಕ ಜಾನಪದ ಮತ್ತು ಯಕ್ಷ­ಗಾನ ಅಕಾಡೆಮಿ ಪ್ರಶಸ್ತಿ, 2011­ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲ­ವಾರು ಪ್ರಶಸ್ತಿಗಳು ಅವರಿಗೆ ಲಭಿಸಿವೆ. ಶನಿವಾರ ಕುಂಜಾಲಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.