ADVERTISEMENT

ಯಕ್ಷಗಾನ ಪ್ರದರ್ಶನಕ್ಕೂ ತಟ್ಟಿದ ನೀತಿ ಸಂಹಿತೆ ಬಿಸಿ!

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 19:30 IST
Last Updated 29 ಮಾರ್ಚ್ 2018, 19:30 IST

ಸಿದ್ಧಾಪುರ: ಯಕ್ಷಗಾನ ಪ್ರದರ್ಶನಕ್ಕೆ ಧ್ವನಿವರ್ಧಕ ಪರವಾನಗಿ ಪಡೆಯದೇ ಇರುವ ಸಂಘಟಕರ ವಿರುದ್ಧ ಚುನಾವಣಾ ಆಯೋಗವು ಕಾನೂನು ಕ್ರಮಕ್ಕೆ ಮುಂದಾಗಿದ್ದು, ಯಕ್ಷಗಾನ ಮೇಳಗಳು ಆತಂಕಗೊಂಡಿವೆ.

ಇಲ್ಲಿನ ಅಮಾಸೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಕೋಣ ದೈವಸ್ಥಾನದ ಬಳಿ ಊರಿನ ಯುವಕರು ವಂತಿಗೆ ಸಂಗ್ರಹಿಸಿ ಕಮಲಶಿಲೆ ಮೇಳದಿಂದ ಬುಧವಾರ ಯಕ್ಷಗಾನ ಪ್ರದರ್ಶನ ಹಮ್ಮಿಕೊಂಡಿದ್ದರು. ಪೆರ್ಡೂರು, ನೀಲಾವರ ಮೇಳದ ಅತಿಥಿ ಕಲಾವಿದರನ್ನು ಕರೆಸಲಾಗಿತ್ತು. ಆದರೆ, ಪ್ರದರ್ಶನ ಆಯೋಜಕರು ಧ್ವನಿವರ್ಧಕ ಬಳಕೆಗೆ ಪರವಾನಗಿ ಪಡೆಯದೇ ಇರುವುದು ಕುತ್ತು ತಂದಿದೆ. ಉಪವಿಭಾಗಾಧಿಕಾರಿ ಭೂಬಾಲನ್ ಪ್ರದರ್ಶನ ನಡೆಯುವ ಸ್ಥಳಕ್ಕೆ ಖುದ್ದು ಬಂದು ಪರವಾನಗಿ ಪಡೆಯಬೇಕು ಎಂದು ತಿಳಿಸಿದ್ದರು.

‘ಯಕ್ಷಗಾನಕ್ಕೆ ದ್ವನಿವರ್ಧಕ ಅಳವಡಿಸಲು ಪರವಾನಗಿ ಪಡೆಯಬೇಕು ಎಂಬುದಿಲ್ಲ. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿ ಆಗಿರುವುದರಿಂದ ಧ್ವನಿವರ್ಧಕ ಬಳಕೆಗೆ ಪರವಾನಗಿ ಕಡ್ಡಾಯ ಎಂದು ಆಯೋಗವು ಸ್ಪಷ್ಟವಾಗಿ ತಿಳಿಸಿದೆ. ಧ್ವನಿವರ್ಧಕ ಬಳಸಿದರೆ ಶಿಸ್ತು ಕ್ರಮ ಖಚಿತ’ ಎಂದು ಅವರು ಎಚ್ಚರಿಸಿದ್ದರು.

ADVERTISEMENT

ಹೀಗಿದ್ದರೂ ಮೇಳದವರು ಧ್ವನಿವರ್ಧಕ ಬಳಸಿರುವ ವಿಡಿಯೊ ವೈರಲ್‌ ಆಗಿದೆ. ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದರಿಂದ ದೈವಸ್ಥಾನದ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಪವಿಭಾಗಾಧಿಕಾರಿ ಭೂಬಾಲನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.