ಶಿವಮೊಗ್ಗ: ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಂದೇ ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತು ಕ್ಷಣ ಕಾಲ ಮಾತುಕತೆ ನಡೆಸಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ನಡೆದ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭವು ಇವರಿಬ್ಬರ ಉಪಸ್ಥಿತಿಗೆ ಸಾಕ್ಷಿಯಾಯಿತು.
ತಡವಾಗಿ ವೇದಿಕೆಗೆ ಆಗಮಿಸಿದ ಶಾಮನೂರು ಅವರನ್ನು ನಗುಮುಖದಿಂದಲೇ ಸ್ವಾಗತಿಸಿದ ಯಡಿಯೂರಪ್ಪ, ತಾವು ಕುಳಿತ ಕುರ್ಚಿಯನ್ನು ಶಾಮನೂರು ಅವರಿಗೆ ಬಿಟ್ಟು, ಪಕ್ಕದ ಕುರ್ಚಿಯಲ್ಲಿ ಕುಳಿತರು.
ಮೊದಲು ಮಾತನಾಡಿದ ಶಾಮನೂರು ಶಿವಶಂಕರಪ್ಪ ಅವರು, `ನಾನು ಕಾಂಗ್ರೆಸ್ ಶಾಸಕ. ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿಯಲ್ಲಿದ್ದಾರೆ. ಈಗ ಅವರು ಹೊಸ ಪಕ್ಷ ಕಟ್ಟುವ ತಯಾರಿಯಲ್ಲಿದ್ದಾರೆ. ಇಲ್ಲಿ ಎಲ್ಲ ಪಕ್ಷದವರೂ ಇದ್ದೇವೆ. ಹಾಗಂತ ಯಾವುದೇ ರಾಜಕೀಯ ಪಕ್ಷವನ್ನು ಮಹಾಸಭಾ ಬೆಂಬಲಿಸುವುದಿಲ್ಲ~ ಎಂದರು.
ತದನಂತರ ಮಾತನಾಡಿದ ಯಡಿಯೂರಪ್ಪ, ಹಿರಿಯರಾದ ಶಾಮನೂರು ಅವರ ನೇತೃತ್ವದಲ್ಲಿ ಮಹಾಸಭಾ ಉತ್ತಮ ಕೆಲಸಗಳನ್ನು ಮಾಡಲಿ ಎಂದು ಆಶಯ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.