ADVERTISEMENT

ಯುವಕರ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2017, 19:30 IST
Last Updated 8 ಅಕ್ಟೋಬರ್ 2017, 19:30 IST

ಮಂಗಳೂರು: ನಗರದ ಬಜಾಲ್‌ ಸಮೀಪದ ಪಕ್ಕಲಡ್ಕದಲ್ಲಿ ದನಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ಭಾನುವಾರ ಸಂಜೆ ಯುವಕರ ನಡುವೆ ಘರ್ಷಣೆ ನಡೆದಿದ್ದು, ಒಂದು ಗುಂಪು ಯುವಕರಿಬ್ಬರ ಮೇಲೆ ಹಲ್ಲೆ ನಡೆಸಿದೆ.

ಪಕ್ಕಲಡ್ಕ ನಿವಾಸಿಗಳಾದ ಅಫ್ರಿದಿ ಮತ್ತು ಇಝಾಜ್‌ ಹಲ್ಲೆಗೊಳಗಾದವರು. ಅದೇ ಪ್ರದೇಶದ ನಿವಾಸಿಗಳಾದ ರಾಕೇಶ್‌, ಪ್ರಸಾದ್‌, ಸ್ಟೀವನ್‌, ನಿಖಿಲ್‌ ಮತ್ತು ಇತರರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಕಂಕನಾಡಿ ನಗರ ಪೊಲೀಸ್‌ ಠಾಣೆಗೆ ಅಫ್ರಿದಿ ದೂರು ನೀಡಿದ್ದಾರೆ. ರಾಕೇಶ್‌ ಮತ್ತು ಗುಂಪು ಮಾರಕಾಸ್ತ್ರಗಳೊಂದಿಗೆ ಹಲ್ಲೆ ನಡೆಸಿದೆ. ಈ ಸಂದರ್ಭದಲ್ಲಿ ಮನೆಯ ಎದುರಿಗಿದ್ದ ವಾಹನಗಳಿಗೂ ಹಾನಿ ಮಾಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

‘ಪಕ್ಕಲಡ್ಕದಲ್ಲಿ ಅಫ್ರಿದಿ ಮನೆಯ ಸಮೀಪದಲ್ಲೇ ಭಾನುವಾರ ವಾಲಿಬಾಲ್‌ ಪಂದ್ಯಾವಳಿ ನಡೆಯುತ್ತಿತ್ತು. ಸಂಜೆ 5 ಗಂಟೆ ಸುಮಾರಿಗೆ ಅಫ್ರಿದಿ ಮತ್ತು ಇಝಾಜ್‌ ಅಲ್ಲಿ ಪಂದ್ಯ ವೀಕ್ಷಿಸುತ್ತಿದ್ದರು. ಅಲ್ಲಿಗೆ ತೆರಳಿದ ರಾಕೇಶ್‌ ಮತ್ತು ಗುಂಪು, ಅಫ್ರಿದಿಯನ್ನು ಉದ್ದೇಶಿಸಿ, ‘ನಿನ್ನ ಅಣ್ಣ ಚೆಂಬುಗುಡ್ಡೆಯ ಅಜರ್‌ ಮತ್ತು ಇರ್ಷಾದ್ ದನಗಳನ್ನು ಕಳವು ಮಾಡುತ್ತಿದ್ದಾರೆ. ಸ್ನೇಹಿತರಾಗಿ ಇದ್ದುಕೊಂಡು ನಮ್ಮ ದನಗಳನ್ನೂ ಕಳವು ಮಾಡುತ್ತಿದ್ದಾರೆ. ಅವರನ್ನು ಈ ಪ್ರದೇಶಕ್ಕೆ ಬರದಂತೆ ತಡೆಯಬೇಕು’ ಎಂದು ಒತ್ತಾಯಿಸಿದೆ. ಆಗ ಯುವಕರ ನಡುವೆ ಘರ್ಷಣೆ ನಡೆದಿದೆ. ಒಂದು ಗುಂಪಿನವರು ಅಫ್ರಿದಿ ಮತ್ತು ಇಝಾಜ್‌ ಮೇಲೆ ಹಲ್ಲೆ ನಡೆಸಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಗಾಯಾಳು ಅಫ್ರಿದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ನಡೆಸಿದ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಕನಾಡಿ ನಗರ ಠಾಣೆ ಇನ್‌ಸ್ಪೆಕ್ಟರ್ ರವಿ ನಾಯ್ಕ್ ತಿಳಿಸಿದರು.

ಮತ್ತೊಂದು ಪ್ರಕರಣ: ಪಕ್ಕಲಡ್ಕದಲ್ಲಿ ವಾಲಿಬಾಲ್‌ ಪಂದ್ಯಾವಳಿ ನಡೆಯುತ್ತಿದ್ದ ಸ್ಥಳದಲ್ಲಿ ಭಾನುವಾರ ಬೆಳಿಗ್ಗೆ ವಾಜಹ್ ಎಂಬಾತ ಅಣ್ಣು ಎಂಬಾತನಿಗೆ ಹಲ್ಲೆ ನಡೆಸಿದ್ದಾನೆ. ಗಾಯಾಳು ಅಣ್ಣು ಆಸ್ಪತ್ರೆಗೆ ದಾಖಲಾಗಿದ್ದು, ಈ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.