ADVERTISEMENT

ರಮ್ಯಾ ಪಾದಯಾತ್ರೆಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2014, 19:30 IST
Last Updated 14 ಮಾರ್ಚ್ 2014, 19:30 IST

ಮದ್ದೂರು:- ಕಾಂಗ್ರೆಸ್ ಸಾಧನಾ ಪಾದಯಾತ್ರೆಗೆ ವಿಧಾನ ಪರಿಷತ್‌ ಮಾಜಿ ಸದಸ್ಯ ಮಧು ಜಿ. ಮಾದೇಗೌಡ ಅವರನ್ನು ಆಹ್ವಾನಿಸಿಲ್ಲ ಎಂದು ಆರೋ­ಪಿಸಿ ಕಾಂಗ್ರೆಸ್‌ನ ಕೆಲ ಕಾರ್ಯಕರ್ತರು ಸಂಸದೆ ರಮ್ಯಾ ವಿರುದ್ಧ ಮದ್ದೂರಿನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ತೀವ್ರ ತಳ್ಳಾಟ, ಮಾತಿನ ಚಕಮಕಿ ನಡೆದು, ಪೊಲೀಸರು ಕಾರ್ಯಕರ್ತರನ್ನು ಚದುರಿಸಿದರು.

ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅವರು ಕೆಪಿಸಿಸಿ ಸದಸ್ಯ ಗುರುಚರಣ್ ಅವ­ರೊಂದಿಗೆ ಪಟ್ಟಣದ ಉಗ್ರನರಸಿಂಹ­ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಿದರು. ಬಳಿಕ ಕೋಟೆ ಬೀದಿಯ ಒಂದೆರಡು ಮನೆಗಳಿಗೆ ಭೇಟಿ ನೀಡಿದರು.

ಅಷ್ಟರಲ್ಲಿ ಅಲ್ಲಿಗೆ ಧಾವಿಸಿದ ತಾಲ್ಲೂಕು ಪಂಚಾಯಿತಿ ಸದಸ್ಯ ಭರತೇಶ್, ಕಾರ್ಯಕರ್ತರಾದ ಎಂ.­ಆರ್. ಅವಿನಾಶ್, ಕಾಡರವಿ, ವಳಗೆರೆ­ಹಳ್ಳಿ ಅವಿನಂದನ್, ಮಾಚಹಳ್ಳಿ ಕುಮಾರ್, ಸಿದ್ದು, ಆನಂದ್, ನಗರಕೆರೆ ಪುರುಷೋತ್ತಮ್, ಧನು, ಅಶೋಕ್, ಉಮೇಶ್ ಅವರು ರಮ್ಯಾ ಅವರನ್ನು ಸುತ್ತುವರಿದರು.

‘ನಮ್ಮ ನಾಯಕ ಮಧು ಜಿ. ಮಾದೇಗೌಡ ಅವರನ್ನು ಪಾದ­ಯಾತ್ರೆಗೆ ಆಹ್ವಾನಿಸಿಲ್ಲ. ಅವರನ್ನು ಕಡೆಗಣಿಸಿದ್ದೀರಿ. ಇಲ್ಲಿಗೇ ಪಾದಯಾತ್ರೆ ನಿಲ್ಲಿಸಿ ಮನೆಗೆ ತೆರಳಿ’ ಎಂದು ಕೂಗಾಡಿದರು.

ಈ ಸಂದರ್ಭದಲ್ಲಿ ಗುರುಚರಣ್ ಬೆಂಬಲಿಗರು ಹಾಗೂ ಮಧು ಬೆಂಬಲಿಗರ ನಡುವೆ ತಳ್ಳಾಟ ನೂಕಾಟ ನಡೆಯಿತು.
ರಮ್ಯಾ ವಿರುದ್ಧ ಮಧು ಬೆಂಬ­ಲಿಗರು ಧಿಕ್ಕಾರ ಮೊಳಗಿಸಿದರೆ, ಗುರುಚರಣ್ ಬೆಂಬಲಿಗರು ರಮ್ಯಾ ಪರ­ವಾಗಿ ಜೈಕಾರ ಹಾಕಿದರು.

ಸ್ಥಳ­ದಲ್ಲಿ ಗೊಂದಲದ ವಾತಾ­ವರಣ ಉಂಟಾಗಿ  ರಮ್ಯಾ ಅವರು ಉದ್ರಿಕ್ತ ಗುಂಪಿನಿಂದ ಹೊರ­ಬಂದು ತಮ್ಮ ಕಾರಿನಲ್ಲಿ ಕುಳಿತರು.
ಇತ್ತ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ, ತಳ್ಳಾಟ ಹೆಚ್ಚಾ­ಗುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಪಿಎಸ್ಐ ಶ್ರೀಧರ್, ಕಾರ್ಯಕರ್ತರನ್ನು ಸಮಾ­ಧಾನಪ­ಡಿಸಲು ಗಂಟೆಗೂ ಹೆಚ್ಚು ಕಾಲ ಯತ್ನಿಸಿದರು.

ಆದರೆ, ಮಧು ಬೆಂಬ­ಲಿಗರು ಇದಕ್ಕೆ ಜಗ್ಗದೇ ರಸ್ತೆಯಲ್ಲಿ ಕುಳಿತು ಪಾದಯಾತ್ರೆ ಮುಂದೆ ಹೋಗದಂತೆ ಅಡ್ಡಿಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.