ಹೊನ್ನಾವರ: ‘ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯ ಅಣಕು ನಾಟಕ ಪ್ರದರ್ಶನ ಮಾಧ್ಯಮದವರಿಂದ ನಡೆದಿದ್ದು, ಅವರಿಗೆ ಅತೀಂದ್ರಿಯ ಶಕ್ತಿ ಇರುವಂತಿದೆ. ರವಿ, ಕವಿ, ಕಪಿ ಕಾಣದ್ದನ್ನು ಮಾಧ್ಯಮದವರು ಕಾಣುತ್ತಿದ್ದಾರೆ’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಲೇವಡಿ ಮಾಡಿದರು.
ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ಯುವ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಪಕ್ಷ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ. ಪಟ್ಟಿ ಬಿಡುಗಡೆ ಮಾಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿರುವುದು ಸುಳ್ಳು. ಸಿದ್ಧಾಂತ, ಸಂಘಟನೆಯ ಶಕ್ತಿ ಇರುವ ಕಾರ್ಯಕರ್ತರನ್ನು ಯಾವುದೇ ಸುದ್ದಿ ವಿಚಲಿತಗೊಳಿಸಲು ಸಾಧ್ಯವಿಲ್ಲ. ಅತ್ಯುತ್ಸಾಹ, ಬಿಜೆಪಿ ಬಗ್ಗೆ ಪ್ರೀತಿ ತೋರುತ್ತಿರುವ ಮಾಧ್ಯಮದವರಿಗೆ ಧನ್ಯವಾದಗಳು’ ಎಂದು ಅವರು ಹೇಳಿದರು.
‘ಅಭ್ಯರ್ಥಿ ಹೆಸರಿಗೆ ಮಾತ್ರ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಯ್ಕೆ ಮಾಡುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೊರತೆ ಕಾಣಲು ಸಾಧ್ಯವಿಲ್ಲ. ಕಾರ್ಯಕರ್ತರು ಹಾಗೂ ಜನರ ಮನಸ್ಸಿನಲ್ಲಿ ಇರುವ ವ್ಯಕ್ತಿಗಳೇ ಪಕ್ಷದ ಅಭ್ಯರ್ಥಿಗಳಾಗಲಿದ್ದಾರೆ’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.