ADVERTISEMENT

ರಸಮೇವು ಬೆಳೆಯಲು ಉತ್ತೇಜನ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 19:30 IST
Last Updated 6 ಅಕ್ಟೋಬರ್ 2012, 19:30 IST

ಬಳ್ಳಾರಿ: ವಾಣಿಜ್ಯ ಬೆಳೆ ಪ್ರಮಾಣದ ಹೆಚ್ಚಳ ಮತ್ತು ಬರಗಾಲದಿಂದಾಗಿ ಜಾನುವಾರುಗಳು ಎದುರಿಸುತ್ತಿರುವ ಮೇವಿನ ಕೊರತೆ ನೀಗಿಸಲು ಕರ್ನಾಟಕ ಹಾಲು ಒಕ್ಕೂಟವು ಮೇವು ಬೆಳೆಯುವ ರೈತರಿಗೆ ಉತ್ತೇಜನ ನೀಡಲು ನಿರ್ಧರಿಸಿದ್ದು, ರಾಜ್ಯದಾದ್ಯಂತ ಮೇವು ಬ್ಯಾಂಕ್ ಸ್ಥಾಪಿಸಲು ಮುಂದಾಗಿದೆ.

ರಾಜ್ಯದ ಕೋಲಾರ, ಮೈಸೂರು, ದಕ್ಷಿಣ ಕನ್ನಡ, ಶಿವಮೊಗ್ಗ ಬಳ್ಳಾರಿ, ಹಾಲುಒಕ್ಕೂಟಗಳ ಅಡಿಯಲ್ಲಿ `ಮೇವು ಬೆಳೆಗಾರರ ಉತ್ತೇಜನ ಯೋಜನೆ~ ಅಡಿ ಮೇವು ಸಂಸ್ಕರಣೆ ಮತ್ತು ಪೌಷ್ಟೀಕರಣ  ಘಟಕ ನಿರ್ಮಿಸಲಿದೆ.
ಮೇವು ಬೆಳೆಯುವ ರೈತರಿಗೆ ಪ್ರತಿ ಎಕರೆಗೆ ಇಂತಿಷ್ಟು ಎಂಬಂತೆ ಸಹಾಯಧನ ಸೌಲಭ್ಯ ಕಲ್ಪಿಸಲಾಗುವುದು. ಅವರಿಂದ ಮೇವು ಖರೀದಿಸಿ, ಸಂಸ್ಕರಿಸಿ, ಬೇಸಿಗೆಯಲ್ಲಿ ಲಾಭ-ನಷ್ಟರಹಿತ ದರದಲ್ಲಿ ಅಗತ್ಯವಿರುವ ರೈತರಿಗೆ ಮೇವು ಬ್ಯಾಂಕ್ ಮೂಲಕ ಮಾರಲಾಗುವುದು.

ಒಕ್ಕೂಟದ ಅಡಿ ರಾಯಚೂರು ಜಿಲ್ಲೆಯ ದಡೇಸುಗೂರು ಗ್ರಾಮದ ಬಳಿ ಮೇವು ಸಂಸ್ಕರಣೆ ಮತ್ತು ಪೌಷ್ಟೀಕರಣ ಘಟಕ ಸ್ಥಾಪನೆಯಾಗಲಿದ್ದು, ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಕೂಡ್ಲಿಗಿ, ಹೂವಿನ ಹಡಗಲಿಯ ಇಟಗಿ, ಕೊಪ್ಪಳ ಜಿಲ್ಲೆಯ ಬೂದುಗುಂಪ ಕ್ರಾಸ್ ಸೇರಿದಂತೆ ಒಟ್ಟು ಐದು ಮೇವು ಬ್ಯಾಂಕ್ ಸ್ಥಾಪಿಸಲಾಗುವುದು ಎಂದು ಬಳ್ಳಾರಿ, ರಾಯಚೂರು, ಕೊಪ್ಪಳ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ಡಾ.ಕೃಷ್ಣಾರೆಡರೂಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ದಡೇಸುಗೂರಿನ ಮೇವು ಸಂಸ್ಕರಣಾ ಘಟಕಕ್ಕೆ ರೂ 1.10 ಕೋಟಿ ಮಂಜೂರಾಗಿದೆ. ಇದರಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ರೂ 42.5 ಲಕ್ಷ ಅನುದಾನ ಇದೆ.

ರೈತರಿಂದ ಖರೀದಿಸಿದ ಮೇವನ್ನು ಯೂರಿಯಾ ಗೊಬ್ಬರ, ಬೆಲ್ಲ ಮತ್ತು ಉಪ್ಪು ಮಿಶ್ರಣ ಮಾಡಿ ಸಂಸ್ಕರಿಸಿ ಸಂಗ್ರಹಿಸಲಾಗುವುದು. ಬೇಸಿಗೆ ಅವಧಿಯಲ್ಲಿ ಬ್ಯಾಂಕ್ ಮೂಲಕ ರೈತರಿಗೆ ವಿತರಿಸಲಾಗುವುದು. ಘಟಕದ ನಿರ್ಮಾಣ ಪ್ರಕ್ರಿಯೆ ಅಂಗವಾಗಿ ಟೆಂಡರ್ ಹಂತ ಆರಂಭವಾಗಿದೆ ಎಂದು ಅವರು ಹೇಳಿದ್ದಾರೆ.

ಮೇವು ಹಾನಿ ತಡೆಗೆ ಕ್ರಮ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಶೇ 60ರಷ್ಟು ರೈತರು ಕಟಾವಿನ ನಂತರ  ಬತ್ತದ ಹುಲ್ಲನ್ನು ಜಾನುವಾರುಗಳಿಗೆ ಆಹಾರವಾಗಿ ಬಳಸದೆ, ಸುಟ್ಟು ಹಾಕುತ್ತಿದ್ದಾರೆ. ಇದನ್ನು ತಡೆಯಲೆಂದೇ ಪ್ರಸಕ್ತ ಸಾಲಿನಿಂದ ಬತ್ತದ ಹುಲ್ಲು ಖರೀದಿಸಿ, ಸಂಗ್ರಹಿಸುವ ಯೋಜನೆ ಆರಂಭವಾಗಲಿದೆ.

ಇದರಿಂದ ಬತ್ತ ಬೆಳೆಯುವ ರೈತರಿಗೂ ಲಾಭವಾಗಲಿದ್ದು, ಮಳೆಯಾಶ್ರಿತ ಪ್ರದೇಶಗಳಲ್ಲಿನ ಜಾನುವಾರುಗಳು ಎದುರಿಸುವ ಮೇವಿನ ಕೊರತೆಯನ್ನೂ ನೀಗಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ರಸ ಮೇವಿಗೂ ಪ್ರೋತ್ಸಾಹ: ನೀರಾವರಿ ಭಾಗದ ರೈತರು ವಾಣಿಜ್ಯ ಬೆಳೆಗೆ ಆದ್ಯತೆ ನೀಡುತ್ತಿರುವುದರಿಂದ ಮೇವಿನ ಕೊರತೆ ಎದುರಾಗಿದೆ. ಮೇವು ಬೆಳೆಯುವಂತೆ ಅವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮೇವಿನ ಬೀಜ ವಿತರಿಸಿ, ಎಕರೆಗೆ ಇಂತಿಷ್ಟು ಎಂದು ಹಣ ನೀಡಿ ರಸಮೇವನ್ನು ಖರೀದಿಸುವ ವಿನೂತನ ಯೋಜನೆಯನ್ನೂ ಒಕ್ಕೂಟ ಪ್ರಸಕ್ತ ಸಾಲಿನಿಂದಲೇ ಜಾರಿಗೆ ತರಲಿದೆ.

ಕನಿಷ್ಠ ಎರಡು ಎಕರೆ ಭೂಮಿಯಲ್ಲಿ ಜೋಳದ ಮೇವನ್ನು ಬೆಳೆಯುವ ರೈತರಿಗೆ ರೂ. 6 ಲಕ್ಷ ಸಾಲ  ನೀಡಲಾಗುವುದು. ಜಮೀನಿನಲ್ಲೇ 10 ಟನ್ ಮೇವನ್ನು ಸಂಗ್ರಹಿಸುವ ಸಾಮರ್ಥ್ಯದ 20 ಅಡಿ ಆಳದ, 6ರೂ6 ಅಡಿ ಸುತ್ತಳತೆಯ ತೊಟ್ಟಿ ನಿರ್ಮಿಸಿಕೊಂಡು, ತಿಂಗಳುಗಳ ಕಾಲ ಹಸಿ ಮೇವನ್ನು ಗಾಳಿ ಸೋಕದಂತೆ ಸಂಗ್ರಹಿಸಿ ಇಟ್ಟುಕೊಳ್ಳುವಂತೆ ಸೂಚಿಸಲಾಗುತ್ತದೆ. ಮೇವು ಕತ್ತರಿಸುವ ಯಂತ್ರವನ್ನೂ ಸಹಾಯಧನ ಸೌಲಭ್ಯದಡಿ ನೀಡುವ ಮೂಲಕ ಉತ್ತೇಜನ ನೀಡಲಾಗುತ್ತದೆ. ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದು ಡಾ. ಕೃಷ್ಣಾರೆಡರೂಿ ಕೋರಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.