
ಬೆಂಗಳೂರು: ಅಕಾಲಿಕ ಮರಣಕ್ಕೆ ತುತ್ತಾದ ರಾಕೇಶ್ ಸಿದ್ದರಾಮಯ್ಯ ಅವರ ಬಗ್ಗೆ ಅಪಪ್ರಚಾರ ಮಾಡಲು ಸಾಮಾಜಿಕ ಜಾಲತಾಣಗಳಲ್ಲಿ ಕಸರತ್ತು ನಡೆಸಲಾಗಿದೆ. ಬೇರೆ ಬೇರೆ ಸಂದರ್ಭದ ಛಾಯಾಚಿತ್ರಗಳನ್ನು ಬಳಸಿಕೊಂಡು ರಾಕೇಶ್ ಅವರ ಮಾನಹಾನಿಗೆ ಯತ್ನಿಸಲಾಗಿದೆ ಎಂಬ ಅಭಿಪ್ರಾಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲೇ ವ್ಯಕ್ತವಾಗಿವೆ.
ರಾಕೇಶ್ ಅವರನ್ನು ಹೋಲುವ ವ್ಯಕ್ತಿಯೊಬ್ಬ ಸೆಕ್ಯುರಿಟಿ ಗಾರ್ಡ್ ಒಬ್ಬರಿಗೆ ಒದೆಯುತ್ತಿರುವ ಚಿತ್ರವನ್ನು ಫೇಸ್ಬುಕ್, ವಾಟ್ಸ್ಆ್ಯಪ್, ಟ್ವಿಟರ್ನಲ್ಲಿ ಹರಿಬಿಡಲಾಗಿದೆ. ಆದರೆ, ಈ ಚಿತ್ರವನ್ನು ದೆಹಲಿ ಮೂಲದ ನೀರಜ್ ವರ್ಮಾ ಎಂಬುವವರು ಜೂನ್ 1ರಂದು ಟ್ವೀಟ್ ಮಾಡಿದ್ದಾರೆ. ಈ ಚಿತ್ರವನ್ನು 310 ಮಂದಿ ರಿಟ್ವೀಟ್ ಮಾಡಿದ್ದಾರೆ. ‘ಏಕ್ ದೇಶ್ ಏಕ್ ವಿಚಾರ್’ ಎಂಬ ಟ್ವಿಟರ್ ಖಾತೆಯಿಂದಲೂ ಈ ಚಿತ್ರ ಜೂನ್ 1ರಂದೇ ಟ್ವೀಟ್ ಆಗಿದೆ.
‘ಕಿರುತೆರೆ ನಟಿ ಹಾಗೂ ಗೆಳೆಯರೊಂದಿಗೆ ರಾಕೇಶ್ ‘ಟುಮಾರೊ ಲ್ಯಾಂಡ್’ ಎಂಬ ಮೋಜಿನಕೂಟಕ್ಕೆ ಹೋಗಿದ್ದರು. ಈ ಮೋಜಿನಕೂಟಕ್ಕೆ ಒಬ್ಬರಿಗೆ ಪ್ರವೇಶ ಶುಲ್ಕ ₹ 3 ಲಕ್ಷ. ಮದ್ಯ ಹಾಗೂ ಮಾದಕ ವಸ್ತುಗಳ ನಶೆ ಹೆಚ್ಚಾಗಿರುವುದೇ ಈ ಮೋಜಿನಕೂಟದ ವಿಶೇಷ’ ಎಂಬ ಸಂದೇಶ ಫೇಸ್ಬುಕ್, ವಾಟ್ಸ್ಆ್ಯಪ್ಗಳಲ್ಲಿ ಹರಿದಾಡುತ್ತಿದೆ.
ಈ ಸಂದೇಶದ ಜತೆಗೆ ರಾಕೇಶ್ ಅವರು ಬೆಂಗಳೂರಿನ ಚರ್ಚ್ ಸ್ಟ್ರೀಟ್ನ ರೆಸ್ಟೊರಂಟ್ನಲ್ಲಿ ತಿಂಗಳ ಹಿಂದೆ ಗೆಳೆಯರೊಂದಿಗೆ ಸೇರಿದ್ದ ವೇಳೆ ತೆಗೆಸಿಕೊಂಡಿದ್ದರು ಎನ್ನಲಾದ ಚಿತ್ರ ಹಾಕಲಾಗಿದೆ.
ಈ ಚಿತ್ರದ ಬಗ್ಗೆ ಸ್ಪಷ್ಟನೆ ನೀಡಿರುವ ಅನಂತ್ ನಾರಾಯಣ್ ಎಂಬ ರಾಕೇಶ್ ಅವರ ಗೆಳೆಯರು, ‘ತಿಂಗಳ ಹಿಂದೆ ಚರ್ಚ್ ಸ್ಟ್ರೀಟ್ನ ಬೀರ್ ರಿಪಬ್ಲಿಕ್ ರೆಸ್ಟೊರಂಟ್ನಲ್ಲಿ ರಾಕೇಶ್ ಗೆಳೆಯರೊಂದಿಗಿನ ಸಂತೋಷದ ಕ್ಷಣಗಳಲ್ಲಿ ತೆಗೆಸಿಕೊಂಡಿದ್ದ ಚಿತ್ರ ಇದು. ಅಂದು ಕೇವಲ ಊಟ ಮಾಡಲು ಮಾತ್ರ ನಾವು ರೆಸ್ಟೊರಂಟ್ನಲ್ಲಿ ಸೇರಿದ್ದೆವು. ಆದರೆ, ಈ ಚಿತ್ರವನ್ನು ಅಪಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತಿರುವುದು ದುರದೃಷ್ಟಕರ’ ಎಂದು ಫೇಸ್ಬುಕ್ನಲ್ಲಿ (Ananth Narayan) ಬರೆದುಕೊಂಡಿದ್ದಾರೆ.
ಮೂಲ ಟ್ವೀಟ್ಗಳ ಕೊಂಡಿ: http://bit.ly/2aJLTNS
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.