ADVERTISEMENT

ರಾಜ್ಯಕ್ಕೆ ಬರಲಿದೆ ರಾಹುಲ್ ಆಪ್ತರ ತಂಡ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 19:59 IST
Last Updated 2 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಂಭವನೀಯ ಅಭ್ಯರ್ಥಿಗಳನ್ನು ಗುರುತಿಸಲು ರಾಜ್ಯಕ್ಕೆ ತಮ್ಮ ಆಪ್ತರ ತಂಡವೊಂದನ್ನು ರಾಜ್ಯಕ್ಕೆ ಕಳುಹಿಸಲು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮುಂದಾಗಿದ್ದಾರೆ. ಈ ತಿಂಗಳ ಅಂತ್ಯ ಅಥವಾ ಅಕ್ಟೋಬರ್ ಮೊದಲ ವಾರ ಈ ತಂಡ ರಾಜ್ಯಕ್ಕೆ ಬರುವ ಸಾಧ್ಯತೆ ಇದೆ.

`ರಾಹುಲ್ ಅವರಿಗೆ ನಿಕಟವಾಗಿರುವ ಕಾಂಗ್ರೆಸ್‌ನ ಕೆಲ ನಾಯಕರ ತಂಡ ವಿವಿಧ ಜಿಲ್ಲೆಗಳಲ್ಲಿ ರಹಸ್ಯವಾಗಿ ಪ್ರವಾಸ ಕೈಗೊಂಡ ಬಳಿಕ ವರದಿಯೊಂದನ್ನು ಸಿದ್ಧಪಡಿಸಲಿದೆ. ಪಕ್ಷದ ಟಿಕೆಟ್ ಆಕಾಂಕ್ಷಿಗಳು, ಅವರು ಹೊಂದಿರುವ ಜನಬೆಂಬಲ, ಎದುರಾಳಿ ಪಕ್ಷಗಳ ಮುಖಂಡರ ಬಲಾಬಲ ಮತ್ತಿತರ ಸಂಗತಿಗಳ ಕುರಿತು ಈ ತಂಡ ಮಾಹಿತಿ ಕಲೆಹಾಕಲಿದೆ. ನಂತರ ರಾಹುಲ್ ಅವರಿಗೆ ವರದಿ ಸಲ್ಲಿಸಲಿದೆ' ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೂ ತಲಾ ಮೂವರು ವೀಕ್ಷಕರನ್ನು ಕೆಪಿಸಿಸಿ ನಿಯೋಜಿಸಿದೆ. ಈ ತಂಡಗಳು ಈಗಾಗಲೇ ಕ್ಷೇತ್ರಗಳಿಗೆ ಭೇಟಿ ನೀಡಿದ್ದು, ಮಾಹಿತಿ ಸಂಗ್ರಹಿಸುತ್ತಿವೆ. ಪ್ರತಿಯೊಂದು ಲೋಕಸಭಾ ಕ್ಷೇತ್ರಕ್ಕೂ ಮೂರರಿಂದ ಐವರು ಸಂಭವನೀಯ ಅಭ್ಯರ್ಥಿಗಳ ಹೆಸರನ್ನು ಸೂಚಿಸುವಂತೆ ವೀಕ್ಷಕರ ತಂಡಗಳಿಗೆ ಕೆಪಿಸಿಸಿ ಅಧ್ಯಕ್ಷರು ನಿರ್ದೇಶನ ನೀಡಿದ್ದಾರೆ. ವೀಕ್ಷಕರು ಸಲ್ಲಿಸಿರುವ ವರದಿಯನ್ನು ಪರಿಶೀಲಿಸಿದ ಬಳಿಕ ಕೆಪಿಸಿಸಿ ಚುನಾವಣಾ ಸಮಿತಿಯು ತನ್ನ ಶಿಫಾರಸನ್ನು ಹೈಕಮಾಂಡ್‌ಗೆ ಸಲ್ಲಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.