ಬೆಂಗಳೂರು: ರಾಜ್ಯದಲ್ಲಿ ಎಂಟು ತಿಂಗಳ ಅವಧಿಯಲ್ಲಿ ಕೋಮು ಗಲಭೆ ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ಸೇರಿದಂತೆ
ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ 11,093 ಮಂದಿಯನ್ನು ಹೊಸದಾಗಿ ರೌಡಿಗಳ ಪಟ್ಟಿಗೆ ಸೇರಿಸಲಾಗಿದೆ.
ನಗರದ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಎಂ.ಎನ್.ರೆಡ್ಡಿ ಈ ವಿಷಯ ತಿಳಿಸಿದರು.
ಮುಂಬೈನಲ್ಲಿ ಪತ್ರಕರ್ತೆ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಬಳಿಕ ರಾಜ್ಯದಲ್ಲಿ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಸೇರಿದಂತೆ ಮಹಿಳೆ ಮೇಲೆ ದೌರ್ಜನ್ಯ ನಡೆಸುವ ಆರೋಪಿಗಳನ್ನು ರೌಡಿಗಳ ಪಟ್ಟಿಗೆ ಸೇರಿಸುವಂತೆ 2013ರ ಆಗಸ್ಟ್ನಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದರು. ಆ ಆದೇಶದ ನಂತರ ಇಲಾಖೆ ರೌಡಿ ಪಟ್ಟಿಯನ್ನು ಪರಿಷ್ಕರಣೆ ಮಾಡಿದೆ.
‘ಡಿಜಿಪಿ ಅವರ ಆದೇಶಕ್ಕೂ ಮುನ್ನ ರಾಜ್ಯದಲ್ಲಿ 17,842 ಮಂದಿಯ ಹೆಸರು ರೌಡಿಗಳ ಪಟ್ಟಿಯಲ್ಲಿತ್ತು. ಪರಿಷ್ಕರಣೆ ಬಳಿಕ 26,838 ಆರೋಪಿಗಳು ರೌಡಿಪಟ್ಟಿಗಳಲ್ಲಿದ್ದಾರೆ. ವೃದ್ಧಾಪ್ಯ, ಅನಾರೋಗ್ಯ ಹಾಗೂ ಅಪರಾಧ ಚಟುವಟಿಕೆಗಳಿಂದ ದೂರ ಉಳಿದಿರುವ 2,097 ಮಂದಿಯನ್ನು ರೌಡಿಪಟ್ಟಿಯಿಂದ ಕೈಬಿಡಲಾಗಿದ್ದು, ಹೊಸದಾಗಿ 11,093 ಮಂದಿಯನ್ನು ಪಟ್ಟಿಗೆ ಸೇರಿಸಲಾಗಿದೆ’ ಎಂದು ಎಂ.ಎನ್.ರೆಡ್ಡಿ ಮಾಹಿತಿ ನೀಡಿದರು.
‘ಅತ್ಯಾಚಾರ, ಲೈಂಗಿಕ ಕಿರುಕುಳ, ಚುಡಾಯಿಸುವುದು ಸೇರಿದಂತೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಕೃತ್ಯಗಳಲ್ಲಿ ತೊಡಗಿದ್ದ 462 ಮಂದಿ ವಿರುದ್ಧ ರೌಡಿ ಪಟ್ಟಿ ತೆರೆಯಲಾಗಿದೆ. ಜತೆಗೆ ಕೋಮುಗಲಭೆ, ಭೂಗಳ್ಳತನದಲ್ಲಿ ತೊಡಗಿದ್ದವರನ್ನೂ ಸಹ ಗೂಂಡಗಳೆಂದು ಪರಿಗಣಿಸಿ ಕ್ರಮ ಕೈಗೊಳ್ಳಲಾಗಿದೆ’ ಎಂದರು.
‘ಈ ರೌಡಿಗಳ ಚಟುವಟಿಕೆಗಳ ಮೇಲೆ ವಿಶೇಷ ದಳ ಹಾಗೂ ಪೊಲೀಸರು ನಿಗಾ ವಹಿಸಲಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗೂಂಡಾ ಕಾಯ್ದೆಯಡಿ ಬಂಧಿತರಾಗಿರುವ 433 ಆರೋಪಿಗಳನ್ನು ಹಾಗೂ 12,932 ರೌಡಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.
ಒಂದು ಧರ್ಮಕ್ಕೆ ಸೇರಿದ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ರೌಡಿ ಪಟ್ಟಿ ತೆರೆಯಲಾಗುತ್ತಿದೆ ಎಂಬ ಆರೋಪ ಇದೆ ಎಂಬುದಕ್ಕೆ ಪ್ರತಿಕ್ರಿಯಿಸಿದ ರೆಡ್ಡಿ, ‘ಈ ಆರೋಪದಲ್ಲಿ ಹುರುಳಿಲ್ಲ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ಯಾವುದೇ ವ್ಯಕ್ತಿಯ ವಿರುದ್ಧ ರೌಡಿ ಪಟ್ಟಿ ತೆರೆಯಲಾಗುವುದು. ಇತ್ತೀಚೆಗೆ ರಾಜ್ಯದ ಕರಾವಳಿ ಭಾಗದಲ್ಲಿ ಧರ್ಮದ ರಕ್ಷಣೆ ಹೆಸರಿನಲ್ಲಿ ಶಾಂತಿ ಕದಡಿದವರ ವಿರುದ್ಧವೂ ರೌಡಿ ಪಟ್ಟಿ ತೆರೆದು ಮಂಗಳೂರು ಪೊಲೀಸರು ಕ್ರಮ ಕೈಗೊಂಡಿದ್ದಾರೆ’ ಎಂದು ಸ್ಪಷ್ಟಪಡಿಸಿದರು.
ಗೂಂಡಾ ಕಾಯ್ದೆ, ಗಡಿಪಾರು
ರಾಜ್ಯದಲ್ಲಿ ರೌಡಿಗಳ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿರುವ ಪೊಲೀಸರು, ಇದೇ ಮೊದಲ ಬಾರಿಗೆ 50 ಮಂದಿ ರೌಡಿಗಳ ವಿರುದ್ಧ ಗೂಂಡಾ ಕಾಯ್ದೆಯನ್ನು ಪ್ರಯೋಗಿಸಿದ್ದಾರೆ. ಹಾಗೆಯೇ 100 ರೌಡಿಗಳ
ಗಡಿಪಾರಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ.
ರಾಜಧಾನಿಯಲ್ಲಿ ಅಧಿಕ ರೌಡಿಗಳು
ರಾಜ್ಯದಲ್ಲಿ ಬೆಂಗಳೂರು ಅತ್ಯಧಿಕ ರೌಡಿಗಳನ್ನು ಹೊಂದಿರುವ ಪ್ರದೇಶವಾದರೆ, ಧಾರವಾಡ ಜಿಲ್ಲೆ ರೌಡಿಗಳಿಂದ ಸುರಕ್ಷಿತ ಜಿಲ್ಲೆ ಎಂದು ಇಲಾಖೆ ಪರಿಷ್ಕೃತ ಪಟ್ಟಿ ಹೇಳುತ್ತದೆ.
ಬೆಂಗಳೂರು ನಗರದಲ್ಲಿ 2,974 ರೌಡಿಗಳಿದ್ದಾರೆ. ನಂತರ ಬೆಳಗಾವಿ (1,855), ಗುಲ್ಬರ್ಗ (1,666) ಮಂಡ್ಯ (1,483), ರಾಮನಗರ (969), ತುಮಕೂರು (938), ಉತ್ತರ ಕನ್ನಡ (921) ಹಾಗೂ ಚಿತ್ರದುರ್ಗ (903) ಜಿಲ್ಲೆಗಳಲ್ಲಿ ರೌಡಿಗಳ ಹಾವಳಿ ಹೆಚ್ಚಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.