ADVERTISEMENT

ರಾಜ್ಯಸಭೆ ಮಾಜಿ ಸದಸ್ಯ ಸಚ್ಚಿದಾನಂದ ಸ್ವಾಮಿ ನಿಧನ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2017, 19:30 IST
Last Updated 7 ಅಕ್ಟೋಬರ್ 2017, 19:30 IST
ರಾಜ್ಯಸಭೆ ಮಾಜಿ ಸದಸ್ಯ ಸಚ್ಚಿದಾನಂದ ಸ್ವಾಮಿ ನಿಧನ
ರಾಜ್ಯಸಭೆ ಮಾಜಿ ಸದಸ್ಯ ಸಚ್ಚಿದಾನಂದ ಸ್ವಾಮಿ ನಿಧನ   

ಬೆಂಗಳೂರು: ರಾಜ್ಯಸಭೆ ಮಾಜಿ ಸದಸ್ಯ ಸಚ್ಚಿದಾನಂದ ಸ್ವಾಮಿ (87) ಶುಕ್ರವಾರ ರಾತ್ರಿ ನಿಧನರಾದರು. ಅವರು ಅವಿವಾಹಿತರಾಗಿದ್ದರು.

ಕೋಲಾರದವರಾದ ಸ್ವಾಮಿ ಕೋರಮಂಗಲದಲ್ಲಿ ನೆಲೆಸಿದ್ದರು. ನಾಲ್ಕೈದು ದಿನಗಳಿಂದ ತೀವ್ರ ಅಸ್ವಸ್ಥರಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಜವಾಹರಲಾಲ್‌ ನೆಹರು, ಇಂದಿರಾಗಾಂಧಿ, ಫಿರೋಜ್‌ ಗಾಂಧಿ, ನರಸಿಂಹರಾವ್‌, ಚರಣ್‌ಸಿಂಗ್‌, ಮೊರಾರ್ಜಿ ದೇಸಾಯಿ ಅವರಿಗೆ ಆಪ್ತರಾಗಿದ್ದ ಸಚ್ಚಿದಾನಂದ, ಇವರೆಲ್ಲರಿಗೂ ರಾಜಕೀಯ ಸಲಹೆಗಳನ್ನು ನೀಡುತ್ತಿದ್ದರು.  ಉತ್ತರ ಪ್ರದೇಶ ಮುಖ್ಯಮಂತ್ರಿಗಳಾಗಿದ್ದ ಚಂದ್ರಬಾನ್‌ ಗುಪ್ತ ಮತ್ತು ಸಂಪೂರ್ಣಾನಂದ ಅವರಿಗೂ ಆಪ್ತರಾಗಿದ್ದರು.

ADVERTISEMENT

ಕೆಂಗಲ್‌ ಹನುಮಂತಯ್ಯ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಸಚ್ಚಿದಾನಂದ, ದೇವರಾಜ ಅರಸು ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿಯೂ ಕೆಲಸ ಮಾಡುತ್ತಿದ್ದರು.

ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ 12.30ರಿಂದ 1.30ರ ಮಧ್ಯೆ ನಂದಿ ಬೆಟ್ಟದ ಬಳಿಯ ದಿಬ್ಬಗಿರಿ ಶ್ರೀ ವಿಷ್ಣು ಆಶ್ರಮದಲ್ಲಿ ನಡೆಯಲಿದೆ.

ಭೀಮಪ್ಪ ಮಲಗೌಡ ಮಂಜರಗಿ

ಹುಕ್ಕೇರಿ (ಬೆಳಗಾವಿ ಜಿಲ್ಲೆ): ಕರ್ನಾಟಕ ಏಕೀಕರಣದ ಹೋರಾಟಗಾರ ಸಂಕೇಶ್ವರ ಭೀಮಪ್ಪ ಮಲಗೌಡ ಮಂಜರಗಿ (95) ಶನಿವಾರ ನಿಧನರಾದರು.

ಅವರಿಗೆ ಪತ್ನಿ ಹಾಗೂ ಪುತ್ರ ಸಂಕೇಶ್ವರದ ‘ಪ್ರಜಾವಾಣಿ’ ಅರೆಕಾಲಿಕ ವರದಿಗಾರ ಸುರೇಶ ಮಂಜರಗಿ ಇದ್ದಾರೆ.

ಸ್ವಾತಂತ್ರ್ಯ ಸೇನಾನಿ ಅಪ್ಪಣ್ಣಗೌಡ ಪಾಟೀಲರ ನಿಕಟವರ್ತಿಯಾಗಿದ್ದ ಅವರು ಕರ್ನಾಟಕ ಏಕೀಕರಣದ ಚಳವಳಿಯಲ್ಲಿ ಭಾಗವಹಿಸಿದ್ದರು. ಗೋಕಾಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಯಾಗಿದ್ದರು. ಮೃತರ ಅಂತ್ಯಕ್ರಿಯೆ ಶನಿವಾರ ನೆರವೇರಿತು.

ಸಿದ್ದರಾಮಯ್ಯ ಸಹೋದರಿ ಚಿಕ್ಕಮ್ಮ

ಮೈಸೂರು: ತಾಲ್ಲೂಕಿನ ದೇವೇಗೌಡನಹುಂಡಿಯ ದಿ.ಸಣ್ಣೇಗೌಡ ಪತ್ನಿ ಚಿಕ್ಕಮ್ಮ (76) ಅನಾರೋಗ್ಯದಿಂದ ಶುಕ್ರವಾರ ರಾತ್ರಿ ನಿಧನರಾದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಮೂವರು ಸಹೋದರರು, ಮೂವರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ. ಅನಾರೋಗ್ಯದಿಂದ
ಬಳಲುತ್ತಿದ್ದ ಚಿಕ್ಕಮ್ಮ ಹಲವು ದಿನಗಳಿಂದ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗ್ರಾಮದ ಜಮೀನಿನಲ್ಲಿ ಶನಿವಾರ ಅಂತ್ಯಕ್ರಿಯೆ ನೆರವೇರಿತು.

‘ಸಿದ್ದರಾಮನಹುಂಡಿಯ ಪಕ್ಕದ ಗ್ರಾಮ ದೇವೇಗೌಡನಹುಂಡಿಗೆ ಹಿರಿಯ ಸಹೋದರಿಯನ್ನು ವಿವಾಹ ಮಾಡಿಕೊಡಲಾಗಿತ್ತು. ಮಕ್ಕಳು ಬೆಳೆದು ದೊಡ್ಡವರಾಗುವವರೆಗೂ ನಮ್ಮೊಟ್ಟಿಗೆ ಇದ್ದರು. ಅಕ್ಕ–ತಮ್ಮನ ನಡುವೆ ಆಪ್ತ ಒಡನಾಟವಿತ್ತು. ದಸರೆಗೆ ಬಂದಾಗ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದೆ’ ಎಂದು ಸಿದ್ದರಾಮಯ್ಯ ಅವರು ಸಹೋದರಿಯನ್ನು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.