ದೊಡ್ಡಬಳ್ಳಾಪುರ: ಅನಾರೋಗ್ಯದಿಂದ ಬಳಲುತ್ತಿದ್ದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಡಾ.ಎನ್. ವೆಂಕಟರೆಡ್ಡಿ (62) ಭಾನುವಾರ ಬೆಳಿಗ್ಗೆ 11ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ ಪತ್ನಿ ಸುಲೋಚನಾ, ಪುತ್ರ ಡಾ.ವಿಷ್ಣುವರ್ಧನ್ ಮತ್ತು ಪುತ್ರಿ ಡಾ.ಸುಮನಾ ಅವರು ಇದ್ದಾರೆ. ಅಂತ್ಯಕ್ರಿಯೆ ಅ. 22 ರಂದು (ಸೋಮವಾರ) ಬೆಳಿಗ್ಗೆ 12ಕ್ಕೆ ತಾಲ್ಲೂಕಿನ ರಾಮೇಶ್ವರ ಸಮೀಪದ ತಬರನ ತೋಟದಲ್ಲಿ ನಡೆಯಲಿದೆ ಎಂದು ಮೃತರ ಕುಟುಂಬದ ಮೂಲಗಳು ತಿಳಿಸಿವೆ.
ಕನ್ನಡ, ದಲಿತ ಹಾಗೂ ರೈತ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಡಾ. ಎನ್.ವೆಂಕಟರೆಡ್ಡಿ ದಿವಂಗತ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಅತ್ಯಂತ ನಿಕಟವರ್ತಿ ಆಗಿದ್ದರು. ಪ್ರೊ.ಎಂಡಿಎನ್ ನಿಧನಾ ನಂತರ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ ರೈತ ಸಂಘವನ್ನು ಪ್ರತಿನಿಧಿಸುತ್ತಿದ್ದರು.
ಬಳ್ಳಾರಿಯವರು: ಡಾ.ಎನ್.ವೆಂಕಟರೆಡ್ಡಿ ಮೂಲತಃ ಬಳ್ಳಾರಿಯವರು. ಬಳ್ಳಾರಿ ತಾಲ್ಲೂಕಿನ ಗುಡದೂರು ಗ್ರಾಮದ ಬಡ ಕೃಷಿ ಕುಟುಂಬದಲ್ಲಿ ಜನಿಸಿದ್ದರು. ಬಳ್ಳಾರಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದರು. 1978ರಲ್ಲಿ ದೊಡ್ಡಬಳ್ಳಾಪುರ ನಗರದಲ್ಲಿ ವೈದ್ಯ ವೃತ್ತಿ ಪ್ರಾರಂಭಿಸಿದ್ದ ಅವರು ಇಡೀ ತಾಲ್ಲೂಕಿನಲ್ಲಿ ಜನಪ್ರಿಯ ವೈದ್ಯರಾಗಿ ಮನೆ ಮಾತಾಗಿದ್ದರು. ರಾಜ್ಯ ಮಟ್ಟದಲ್ಲಿ ಕನ್ನಡಪರ, ರೈತ ಮತ್ತು ದಲಿತ ಸಂಘಟನೆಗಳಲ್ಲಿ ಸದಾ ಮುಂಚೂಣಿಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.