ಮೈಸೂರು: ‘ರಾಮಾಯಣ ಮಹಾಕಾವ್ಯವು ಉಗ್ರ ಹಿಂದೂಗಳದ್ದಲ್ಲ’ ಎಂದು ರಂಗಕರ್ಮಿ ಪ್ರಸನ್ನ ಪ್ರತಿಪಾದಿಸಿದರು.
ದೇಸಿರಂಗ ಸಾಂಸ್ಕೃತಿಕ ಸಂಸ್ಥೆಯು ಭಾನುವಾರ ಇಲ್ಲಿ ಹಮ್ಮಿಕೊಂಡಿದ್ದ ‘ಪ್ರೊ.ಕೆ.ರಾಮದಾಸ್ ನೆನಪಿರಲಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಾಲ್ಮೀಕಿಯ ರಾಮಾಯಣವು ಮಾನವೀಯತೆಯನ್ನು ಬೋಧಿಸುತ್ತದೆ. ಹಿಂಸೆಯನ್ನು ತೊರೆದು ಮಾನವೀಯತೆಯನ್ನು ಅಪ್ಪಿಕೊಳ್ಳುವಂತೆ ಸಲಹೆ ನೀಡುತ್ತದೆ. ಆದರೆ, ಉಗ್ರ ಹಿಂದೂಗಳು ಧರ್ಮದ ಹೆಸರಿನಲ್ಲಿ ಹಿಂಸೆಯನ್ನು ಆಚರಿಸುತ್ತಿದ್ದಾರೆ. ಈ ಮೂಲಕ ಅವರು ರಾಮಾಯಣಕ್ಕೆ ಹಾಗೂ ರಾಮರಾಜ್ಯಕ್ಕೆ ಅಪಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸಭ್ಯತೆಯನ್ನು ಬೋಧಿಸುವ ರಾಮಾಯಣವು ಉಗ್ರ ಹಿಂದೂಗಳಿಗೆ ಒಪ್ಪುವುದಿಲ್ಲ ಎಂದು ಪ್ರಗತಿಪರರು ಧೈರ್ಯವಾಗಿ ಹೇಳಬೇಕು. ಇದನ್ನು ಹೇಳುವ ಮೂಲಕ ಅವರು ಹಿಂದೂ ಧರ್ಮದ ಸರ್ವಾಧಿಕಾರಿಗಳಲ್ಲ ಎಂದು ತಿಳಿಸಬೇಕು ಸಲಹೆ ನೀಡಿದರು.
‘ಉಗ್ರ ಹಿಂದೂ ಹಾಗೂ ಮೃದು ಹಿಂದೂಗಳ ನಡುವಿನ ವ್ಯತ್ಯಾಸವನ್ನು ನಾವು ಗುರುತಿಸಬೇಕು. ಉಗ್ರ ಹಿಂದೂಗಳನ್ನು ನಾವು ವಿರೋಧಿಸಬೇಕು. ಆದರೆ, ಮೃದು ಹಿಂದೂಗಳನ್ನು ವಿರೋಧಿಸುವ ಅಗತ್ಯವಿಲ್ಲ. ಮೃದು ಹಿಂದೂಗಳನ್ನು ಪ್ರಗತಿಪಥದತ್ತ ಸೆಳೆದುಕೊಂಡರೆ ಮಾತ್ರ ಮೋದಿ ಪ್ರಣೀತ ಉಗ್ರ ಹಿಂದೂಗಳ ವಿರುದ್ಧ ಗೆಲುವು ಸಾಧಿಸುವುದು ಸಾಧ್ಯವಾಗುತ್ತದೆ. ಸಾರಾಸಗಟಾಗಿ ಹಿಂದೂಗಳನ್ನೇ ವಿರೋಧಿಸಿದರೆ ಗೆಲುವು ಅಸಾಧ್ಯ’ ಎಂದು ಅಭಿಪ್ರಾಯಪಟ್ಟರು.
ಪ್ರಗತಿಪರರು ಹಿಂದೂ ಧರ್ಮ ವಿರೋಧಿಗಳು, ರಾಮನ ದ್ವೇಷಿಗಳು ಎಂಬ ತಪ್ಪು ಅಭಿಪ್ರಾಯ ಸ್ಥಾಪನೆಯಾಗಿದೆ. ಪ್ರಗತಿಪರರ ಕೆಲವು ವರ್ತನೆಗಳು ಇದಕ್ಕೆ ಕಾರಣ. ಹಾಗಾಗಿ, ಪ್ರಗತಿಪರರು ತಮ್ಮ ವರ್ತನೆಗಳನ್ನು ಬದಲಿಸಿಕೊಳ್ಳಬೇಕು. ಮೋದಿ ಅನುಯಾಯಿಗಳ ಅತಿರೇಕವನ್ನು ಮಾತ್ರ ವಿರೋಧಿಸುತ್ತ, ಮೃದು ಹಿಂದೂಗಳನ್ನು ಒಳಗೊಳ್ಳುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.