ರಾಯಚೂರು: ಉತ್ತರಾ ಖಂಡದಲ್ಲಿ ಪ್ರಕೃತಿ ವಿಕೋಪ ಸಂತ್ರಸ್ತರ ನೆರವಿಗೆ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠವು `ಸಂರಕ್ಷ' ಸಮಿತಿ ರಚನೆ ಮಾಡಿ ಪರಿಹಾರ ಯೋಜನೆ ರೂಪಿಸುತ್ತಿದೆ.
ಸಂಘ-ಸಂಸ್ಥೆ, ದಾನಿಗಳ ನೆರವಿನೊಂದಿಗೆ ಅಂದಾಜು ರೂ.15 ಕೋಟಿ ಮೊತ್ತದಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಮಂತ್ರಾಲಯ ರಾಘವೇಂದ್ರಸ್ವಾಮಿ ಮಠದ ಉತ್ತರಾಧಿಕಾರಿ ಸುಬುಧೇಂದ್ರಸ್ವಾಮಿ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂತ್ರಾಲಯದ ಪೀಠಾಧಿಪತಿ ಸುಯತೀಂದ್ರತೀರ್ಥ ಸ್ವಾಮಿಗಳ ಆದೇಶದ ಮೇರೆಗೆ ಉತ್ತರಾಖಂಡದ ಪ್ರವಾಹ ಸಂತ್ರಸ್ತರ ನೆರವಿಗೆ ಈ ಸಮಿತಿ ರಚನೆ ಮಾಡಲಾಗಿದೆ ಎಂದರು.
ಮೂರು ಹಂತದಲ್ಲಿ ಪರಿಹಾರ ಕಾರ್ಯ:
`ಮೂರು ಹಂತದಲ್ಲಿ ಪ್ರವಾಹ ಪರಿಹಾರ ಕಾರ್ಯ ನಡೆಯಲಿದೆ. ಆಹಾರ, ಆಶ್ರಯ ಮತ್ತು ಸಾರಿಗೆ ವ್ಯವಸ್ಥೆ ಈಗಾಗಲೇ ನಡೆದಿದೆ. ದೆಹಲಿಯಲ್ಲಿರುವ ಮಂತ್ರಾಲಯ ಶಾಖಾ ಮಠ ಒಂದು ಸಾವಿರಕ್ಕೂ ಹೆಚ್ಚು ಭಕ್ತರಿಗೆ ಈ ರೀತಿ ಸಹಾಯ ಮಾಡಿದೆ' ಎಂದರು.
ಎರಡನೇ ಹಂತದಲ್ಲಿ ಹರಿದ್ವಾರದಲ್ಲಿ ಸಂರಕ್ಷಾ ಕ್ಯಾಂಪ್ ಸ್ಥಾಪಿಸಲಾಗುತ್ತದೆ. ಮೂರನೇ ಹಂತದಲ್ಲಿ ಉತ್ತರಾಖಂಡ ಪ್ರದೇಶದಲ್ಲಿ ಪ್ರವಾಹಕ್ಕೆ ತುತ್ತಾದ ಯಾವುದಾದರೂ 3 ಗ್ರಾಮಗಳನ್ನು ಮಂತ್ರಾಲಯ ಮಠ ದತ್ತು ಪಡೆದು ದಾನಿಗಳ ನೆರವು ಮತ್ತು ಸಹಕಾರದಿಂದ ಅಭಿವೃದ್ಧಿಪಡಿಸಲು ತೀರ್ಮಾನಿಸಿದೆ ಎಂದರು.
ಆಸಕ್ತ ಭಕ್ತರು ಮಂತ್ರಾಲಯಮಠ ಉತ್ತರಾಖಂಡ ಪ್ರವಾಹ ಸಂತ್ರಸ್ತರಿಗೆ ಕೈಗೊಂಡ ಈ ಪರಿಹಾರ ಕಾರ್ಯಕ್ಕೆ ನೆರವು ನೀಡಬಹುದಾಗಿದೆ. ವ್ಯವಸ್ಥಾಪಕರು, ಉತ್ತರಾಖಂಡ ಪ್ರವಾಹ ಸಂತ್ರಸ್ತ ನಿಧಿ, ರಾಘವೇಂದ್ರಸ್ವಾಮಿಮಠ, ಮಂತ್ರಾಲಯ - 518345 ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ. ರಾಘವೇಂದ್ರ ಸ್ವಾಮಿಮಠ, ದೆಹಲಿ, ದೂರವಾಣಿ - 011-26708642, ವ್ಯವಸ್ಥಾಪಕ ಜಿ. ಶ್ರೀಪತಿ -94400 77284, ಜಿ. ಕಿಶನರಾವ್ - 9492944316, ರಘುನಂದನ ಶರ್ಮಾ- 90327 14705 ಈ ಮೂಲಕ ಸಂಪರ್ಕಿಸಬಹುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.