ಬಳ್ಳಾರಿ: ಒಂಟಿ ಮನೆ ಮೇಲೆ ದಾಳಿ ನಡೆಸಿದ ಡಕಾಯಿತರ ತಂಡವೊಂದು ಮನೆಯಲ್ಲಿದ್ದವರನ್ನು ಕೂಡಿ ಹಾಕಿ, ವೃದ್ಧೆಯೊಬ್ಬರನ್ನು ಥಳಿಸಿ ನಗನಾಣ್ಯ ದೋಚಿ ಪರಾರಿಯಾಗಿರುವ ಘಟನೆ ತಾಲ್ಲೂಕಿನ ವೇಣಿವೀರಾಪುರ ಗ್ರಾಮದ ಹೊರ ವಲಯದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಗ್ರಾಮದ ವೆಂಕಟೇಶಪ್ಪ ಎಂಬುವವರ ಮನೆಯಲ್ಲೇ ಡಕಾಯಿತಿ ನಡೆದಿದೆ. ಆರು ಜನರಿದ್ದ ಡಕಾಯಿತರ ತಂಡವು, ಮನೆಯ ತಿಜೋರಿಗಳಲ್ಲಿದ್ದ ಒಟ್ಟು ರೂ. 8 ಲಕ್ಷ ನಗದು, 750 ಗ್ರಾಂ ಚಿನ್ನಾಭರಣ ದೋಚಿದೆ.
ಡಕಾಯಿತರು ತೀವ್ರ ಪ್ರತಿರೋಧ ಒಡ್ಡಿದ ವೆಂಕಟೇಶಪ್ಪ ಅವರ ಪತ್ನಿ ಸಂಜೀವಮ್ಮ (60) ಅವರ ಮೇಲೆ ಹಲ್ಲೆ ನಡೆಸಿ, ತಿಜೋರಿ ಬಾಗಿಲು ಮುರಿದು ಹಣ ಮತ್ತು ಚಿನ್ನದೊಂದಿಗೆ ಕತ್ತಲೆಯಲ್ಲಿ ಓಡಿ ಹೋಗಿದ್ದಾರೆ.
ಸಂಜೀವಮ್ಮ ಅವರನ್ನು ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸಗೆ ದಾಖಲಿಸಲಾಗಿದೆ. ಮನೆಯ ಹೊರಗೆ ಛಾವಣಿಯಲ್ಲಿ ಮಲಗಿದ್ದ ವೆಂಕಟೇಶಪ್ಪ ಅವರ ಮೇಲೆ ಹೊದಿಕೆ ಮುಚ್ಚಿ ಮನೆಯೊಳಗೆ ಕರೆದೊಯ್ದರಲ್ಲದೆ, ಒಳಗಿದ್ದ ಪುತ್ರ ಮತ್ತು ಸೊೆಯನ್ನು ಕೋಣೆಯಲ್ಲೇ ಕೂಡಿ ಹಾಕಿ ಈ ಕೃತ್ಯ ಎಸಗಲಾಗಿದೆ.
ಕನ್ನಡ ಮಾತಾಡುತ್ತಿದ್ದ ಈ ಡಕಾಯಿತರಲ್ಲಿ ನಾಲ್ವರು ಮುಖಕ್ಕೆ ಮುಸುಕು ಧರಿಸಿದ್ದರು. ಒಳಗಿನವರು ಕೂಗಿದ್ದು ಕೇಳಿಸದಂತೆ ತಡೆಯಲು ಮನೆಯೊಳಗೆ ನುಗ್ಗಿದ ಕೂಡಲೇ ಮಿಕ್ಸಿ ಆನ್ ಮಾಡಿ ಈ ಕೃತ್ಯ ಎಸಗಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.