ಬೆಂಗಳೂರು: ‘ಸಿನಿಮಾಗಳಿಗೆ ರೇಟಿಂಗ್ ಕೊಡುವುದನ್ನು ಬುಕ್ ಮೈ ಷೋ ಕಂಪೆನಿ ಬ್ಲ್ಯಾಕ್ಮೇಲ್ ದಂಧೆಯಾಗಿ ಮಾಡಿಕೊಂಡಿದೆ. ಹಣ ಕೊಟ್ಟವರಿಗೆ ಜಾಸ್ತಿ ರೇಟಿಂಗ್ ಕೊಟ್ಟು, ಹಣ ಕೊಡದವರಿಗೆ ಕಡಿಮೆ ರೇಟಿಂಗ್ ಕೊಡುತ್ತಾರೆ. ಅಲ್ಲದೆ ಇದು ಜನರೇ ನೀಡಿದ ರೇಟಿಂಗ್ ಎಂಬಂತೆ ಬಿಂಬಿಸಲಾಗುತ್ತಿದೆ. ಈ ಅನ್ಯಾಯ ನಿಲ್ಲಬೇಕು’ ಎಂದು ನಿರ್ಮಾಪಕ ಕೆ.ಮಂಜು ಆಗ್ರಹಿಸಿದರು.
ತಮ್ಮ ನಿರ್ಮಾಣದ ‘ಸತ್ಯ ಹರಿಶ್ಚಂದ್ರ’ ಸಿನಿಮಾ ಕುರಿತು ಮಾಹಿತಿ ಹಂಚಿಕೊಳ್ಳಲು ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಚಿತ್ರದ ಕುರಿತು ಒಳ್ಳೆಯ ಪ್ರತಿಕ್ರಿಯೆ ಇದ್ದರೂ ಬುಕ್ ಮೈ ಷೋ ಕಡಿಮೆ ರೇಟಿಂಗ್ ಕೊಟ್ಟು ಜನರ ದಾರಿ ತಪ್ಪಿಸುತ್ತಿದೆ. ಈ ಕುರಿತು ಚಲನಚಿತ್ರ ವಾಣಿಜ್ಯಮಂಡಳಿಗೆ ದೂರು ನೀಡುತ್ತೇನೆ’ ಎಂದರು.
ಸೆನ್ಸಾರ್ ಮಂಡಳಿ ವಿರುದ್ಧವೂ ಅವರು ಹರಿಹಾಯ್ದ ಅವರು, ‘ನಮ್ಮ ಸಿನಿಮಾ ಸ್ವಲ್ಪ ದೀರ್ಘವಾಯಿತು ಎಂಬ ಅಭಿಪ್ರಾಯ ಜನರಿಂದ ವ್ಯಕ್ತವಾದ್ದರಿಂದ ದ್ವಿತೀಯಾರ್ಧದಲ್ಲಿ ಹನ್ನೆರಡು ನಿಮಿಷ ಕತ್ತರಿಸಿದ್ದೇವೆ. ಪರಿಷ್ಕೃತ ಆವೃತ್ತಿಯನ್ನು ನೋಡಿ ಪ್ರಮಾಣಪತ್ರ ಕೊಡಿ ಎಂದರೆ ಸೆನ್ಸಾರ್ ಮಂಡಳಿ ಸದಸ್ಯರು ಸ್ಪಂದಿಸುತ್ತಿಲ್ಲ’ ಎಂದರು.
ಕೆ.ಮಂಜು ನಿರ್ಮಾಣದ ‘ಸತ್ಯ ಹರಿಶ್ಚಂದ್ರ’ ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ದಯಾಳ್ ಪದ್ಮನಾಭನ್ ನಿರ್ದೇಶನದ ಈ ಚಿತ್ರದಲ್ಲಿ ಶರಣ್ ನಾಯಕನಾಗಿ ನಟಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.