ADVERTISEMENT

ರೈಲು ಏರಿದರೆ ಓಡೋದು ಗೊತ್ತಾಗುತ್ತೆ

ಮೋದಿಗೆ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 20:16 IST
Last Updated 1 ಮಾರ್ಚ್ 2014, 20:16 IST
ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ
ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ   

ಬೆಂಗಳೂರು: ‘ನರೇಂದ್ರ ಮೋದಿ ರೈಲಿನಲ್ಲಿ ಕುಳಿತಿಲ್ಲ. ಪ್ರತಿ ದಿನ ವಿಮಾನ–ಹೆಲಿಕಾಪ್ಟರ್‌ನಲ್ಲಿ ಹಾರಾಡ್ತಾರೆ. ಅದಕ್ಕೇ ಅವರಿಗೆ ರೈಲು ನಿಂತಿದೆಯೋ ಇಲ್ಲವೇ ಓಡುತ್ತಿದೆಯೋ ಎನ್ನುವುದು ಗೊತ್ತಿಲ್ಲ’ ಎಂದು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದರು.

ನಗರದ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಶನಿವಾರ ನಾಲ್ಕು ಹೊಸ ರೈಲುಗಳಿಗೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು. ‘ನಮ್ಮ ರೈಲುಗಳು ನಿಂತಿಲ್ಲ, ಚೆನ್ನಾಗಿ ಓಡುತ್ತಿವೆ. ದೇಶದ ಜನ ಕುಳಿತು ಪ್ರಯಾಣ ಮಾಡುತ್ತಿದ್ದಾರೆ. ಪ್ರತಿದಿನ 2.30 ಕೋಟಿ ಪ್ರಯಾಣಿಕರು ರೈಲುಗಳನ್ನು ಬಳಸುತ್ತಿದ್ದಾರೆ’ ಎಂದು ಹೇಳಿದರು.

ಪಾಪ, ಮೋದಿ ಯಾರೋ ಕೊಟ್ಟ ಮಾಹಿತಿಯನ್ನು ಪರಿಶೀಲಿಸುವ ಗೋಜಿಗೂ ಹೋಗದೆ ‘ಖರ್ಗೆ ಅವರ ರೈಲು ನಿಂತಿದೆ’ ಎಂದಿದ್ದಾರೆ. ಇದು ರಾಜಕೀಯಪ್ರೇರಿತ ಹೇಳಿಕೆ ಎನ್ನುವುದು ಎಲ್ಲರಿಗೂ ಅರ್ಥವಾಗುತ್ತದೆ. ಪ್ರಧಾನಿಯಾಗುವ ಕನಸು ಕಾಣುತ್ತಿರುವ ಮೋದಿಯವರು ರೈಲಿನಲ್ಲಿ ಓಡಾಡಿದರೆ ಅದು ಹೇಗೆ ಓಡುತ್ತದೆ ಎನ್ನುವುದು ಗೊತ್ತಾಗುತ್ತದೆ ಎಂದು ಕುಟುಕಿದರು.

‘ನಾನು ರೈಲ್ವೆ ಸಚಿವನಾಗಿ ಕೇವಲ ಒಂಬತ್ತು ತಿಂಗಳಾಗಿದೆ. ಈಗಾಗಲೇ ರಾಜ್ಯದಿಂದ 14 ರೈಲುಗಳನ್ನು ಶುರು ಮಾಡಿದ್ದೇವೆ. ಈಗ ಮತ್ತೆ ನಾಲ್ಕು ಹೊಸ ರೈಲುಗಳನ್ನು ಆರಂಭಿಸಿದ್ದೇವೆ. ಪ್ರತಿಯೊಂದು ಜಿಲ್ಲೆಯನ್ನೂ ರೈಲುಗಳ ಮೂಲಕ ಸಂಪರ್ಕಿಸುವ ಕೆಲಸ ನಡೆಸಿದ್ದೇವೆ. ಗುಲ್ಬರ್ಗ ವಲಯ ಮಾಡಿದ್ದೇವೆ. ಕೋಲಾರ­ದಲ್ಲಿ ಕೋಚ್‌ ಫ್ಯಾಕ್ಟರಿ ನಿರ್ಮಾಣಕ್ಕೂ ಚಾಲನೆ ನೀಡಿ­ದ್ದೇವೆ. ಯಾವುದೂ ಕಾಣುತ್ತಿಲ್ಲವೆ’ ಎಂದು ಪ್ರಶ್ನಿಸಿದರು.

ಗುಲ್ಬರ್ಗದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ್ದ ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ, ‘ಖರ್ಗೆ ಅವರ ರೈಲು ನಿಂತಿದೆ’ ಎಂದು ಟೀಕಿಸಿದ್ದರು.

ಒಂದು ಹೊಸ ರೈಲಿಗೆ 20 ಕೋಟಿ!
ಬೆಂಗಳೂರು: ‘ಒಂದು ಹೊಸ ರೈಲು ಓಡಿಸಬೇಕಾದರೆ ಇಲಾಖೆಗೆ ₨ 20 ಕೋಟಿ ಹೊರೆ ಬೀಳುತ್ತದೆ. ಎಂಜಿನ್‌ಗೆ ₨ 10 ಕೋಟಿ ವೆಚ್ಚವಾದರೆ, ಪ್ರತಿ ಬೋಗಿಗೆ ₨ 1 ಕೋಟಿಯಂತೆ ಹತ್ತು ಬೋಗಿಗಳ ರೈಲಿಗೆ ಒಟ್ಟಾರೆ ₨ 20 ಕೋಟಿ ಬೇಕಾಗುತ್ತದೆ’ ಎಂದು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

‘ಪ್ಲಾಟ್‌ಫಾರ್ಮ್‌ಗಳ ಅಲಭ್ಯ ಹಾಗೂ ಆರ್ಥಿಕ ಹೊರೆಯಿಂದ ಹೊಸ ರೈಲುಗಳನ್ನು ಆರಂಭಿಸುವುದು ಸುಲಭವಲ್ಲ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT