ಖಾನಾಪುರ:ರೈಲು ಸಂಚರಿಸುವ ಸಮಯದಲ್ಲೇ, ಬಸ್ಸೊಂದು ಬ್ರೇಕ್ ವೈಫಲ್ಯದಿಂದ ಹಳಿ ಮೇಲೆ ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ತಾಲ್ಲೂಕಿನ ಗೋದಗೇರಿ ಬಳಿ ಬುಧವಾರ ನಡೆದಿದೆ. ಆದರೆ, ಸಮಯಪ್ರಜ್ಞೆ ಮೆರೆದ ಗೇಟ್ಮನ್, ಸಂಭವಿಸಲಿದ್ದ ಭಾರಿ ಅನಾಹುತವನ್ನು ತಪ್ಪಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ಗೋದಗೇರಿ ಗ್ರಾಮದಿಂದ ಖಾನಾಪುರಕ್ಕೆ ಬರುತ್ತಿತ್ತು. ಆದರೆ, ಗೋದಗೇರಿ ರೈಲ್ವೆಗೇಟ್ ಬಳಿ, ಇದ್ದಕ್ಕಿದ್ದಂತೆಯೇ ಬಸ್ಸಿನ ಬ್ರೇಕ್ ಫೇಲ್ ಆಗಿದೆ. ಇದರಿಂದ, ಚಾಲಕ ಎಂ.ಎಸ್. ಗುಡಗುಡಿ ವಿಚಲಿತರಾಗಿದ್ದಾರೆ. ಅಷ್ಟರಲ್ಲೇ ಬಸ್ಸು ರೈಲ್ವೆಗೇಟ್ನತ್ತ ನುಗ್ಗಿದೆ. ಗೇಟ್ ಮುರಿದುಬಿದ್ದಾಗ ಬಸ್ ಹಳಿಯ ಮೇಲೆ ಬಂದು ನಿಂತಿದೆ.
ಇದೇ ವೇಳೆಗೆ, ರೈಲು ಸಮೀಪದಲ್ಲಿ ಬರುವುದನ್ನು ಗಮನಿಸಿದ ಗೇಟ್ಮನ್ ಜಾಗೃತರಾಗಿದ್ದಾರೆ. ಕೆಂಪುಬಾವುಟ ಹಿಡಿದು ಹಳಿಗುಂಟ ಓಡಿ ರೈಲು ಚಾಲಕನಿಗೆ ಸಂದೇಶ ನೀಡಿ, ರೈಲು ನಿಲ್ಲುವಂತೆ ಮಾಡುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿದರು. ಅವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.