ಬೆಳಗಾವಿ: ‘ತಮಗೆ ಸಚಿವ ಸ್ಥಾನ ತಪ್ಪಲು ಪ್ರಭಾವಿಗಳೇ ಕಾರಣವೆಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳುತ್ತಿದ್ದಾರೆ. ಇದೇ ಮಾತನ್ನೇ ನಾನು ಕೂಡ ಹೇಳುತ್ತಿದ್ದೇನೆ. ಇಬ್ಬರ ಸಮಸ್ಯೆಯೂ ಒಂದೇ ರೀತಿಯದ್ದಾಗಿದೆ. ಅವರು ಕಣ್ಣೀರು ಸುರಿಸಿಕೊಂಡು ಹೇಳುತ್ತಾರೆ. ನಾನು ಕಣ್ಣೀರು ಹಾಕಲ್ಲ, ಅಷ್ಟೇ ವ್ಯತ್ಯಾಸ’ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿನ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ನ ಪಾಲಿನ ಇನ್ನೂ ಆರು ಸಚಿವ ಸ್ಥಾನಗಳು ಭರ್ತಿಯಾಗಬೇಕಾಗಿದೆ. ಎರಡನೇ ಹಂತದ ವಿಸ್ತರಣೆಯಲ್ಲಿ ಸಚಿವ ಸ್ಥಾನ ಬೇಡವೆಂದು ಈಗಾಗಲೇ ಸ್ಪಷ್ಟ ಪಡಿಸಿದ್ದೇನೆ. ಆದರೆ, ನನ್ನ ಬೆಂಬಲಕ್ಕೆ ಇರುವ 15 ಜನ ಶಾಸಕರ ಪೈಕಿ ಕೆಲವರಿಗೆ ಸಚಿವ ಸ್ಥಾನ ದೊರಕಿಸಿಕೊಡಲು ಪ್ರಯತ್ನ ನಡೆಸಿದ್ದೇನೆ’ ಎಂದು ಹೇಳಿದರು.
‘ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಸಚಿವ ಸ್ಥಾನ ಹಂಚಿಕೆ ಸಮಸ್ಯೆಯು ಪಕ್ಷದೊಳಗಿನ ವಿಷಯವಾಗಿದ್ದು, ಇದನ್ನು ಪಕ್ಷದೊಳಗೇ ಇತ್ಯರ್ಥ ಪಡಿಸಲಾಗುವುದು. ಬೆಂಗಳೂರಿನಲ್ಲಿ ಇದೇ ತಿಂಗಳ 14 ಅಥವಾ 15ರಂದು ಅತೃಪ್ತರ ಸಭೆ ನಡೆಯಲಿದೆ. ದೆಹಲಿ ಹೈಕಮಾಂಡ್ ಭೇಟಿಯಾಗಿ ಬಂದಿರುವ ಎಂ.ಬಿ. ಪಾಟೀಲ ಅವರು ಅಲ್ಲಿ ನಡೆದ ಚರ್ಚೆಗಳ ವಿವರವನ್ನು ಚರ್ಚಿಸಲಿದ್ದಾರೆ. ಆ ನಂತರ ಮುಂದಿನ ನಡೆ ಏನು ಎನ್ನುವುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.