ಬೆಂಗಳೂರು: ಲಾಲ್ಬಾಗ್ ಉದ್ಯಾನದ ಭದ್ರತಾ ಸಿಬ್ಬಂದಿ ಮೇಲೆ ನಡೆಸಿ, ಅದನ್ನು ಪ್ರಶ್ನಿಸಿದ್ದ ಇಮ್ರಾನ್ಖಾನ್ (31) ಎಂಬುವರ ಮೇಲೂ ಹಲ್ಲೆ ಮಾಡಿದ್ದ ಒಡಿಶಾದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜಸಕೇತನ್ ಪದಂ ಹಾಗೂ ದಿನೇಶ್ ಮಂಡಲ್ ಬಂಧಿತರು. ಅವರು ಬನ್ನೇರುಘಟ್ಟ ರಸ್ತೆಯಲ್ಲಿರುವ ಕಂಪನಿಯೊಂದರ ಉದ್ಯೋಗಿಗಳು. ಜಾಮೀನು ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಸಿದ್ದಾಪುರ ಪೊಲೀಸರು ತಿಳಿಸಿದರು.
ನಾಯಂಡಹಳ್ಳಿ ಬಳಿಯ ಮೆಟ್ರೋ ಲೇಔಟ್ ನಿವಾಸಿ ಇಮ್ರಾನ್ಖಾನ್, ವಿಡಿಯೋ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕುಟುಂಬ ಸಮೇತ ಫೆ. 25ರಂದು ಉದ್ಯಾನಕ್ಕೆ ಹೋಗಿದ್ದರು. ಆರೋಪಿಗಳಾದ ಜಸಕೇತನ್ ಹಾಗೂ ದಿನೇಶ್ ಅವರ ಕುಟುಂಬವೂ ಅಲ್ಲೀಗೆ ಬಂದಿತ್ತು.
ಜಸಕೇತನ್ ಅವರ ಮಗ ಈಜುಕೊಳದ ಬಳಿ ಆಟವಾಡಲು ಹೋಗಿದ್ದ. ಆತನನ್ನು ತಡೆದಿದ್ದ ಭದ್ರತಾ ಸಿಬ್ಬಂದಿ, ವಾಪಸ್ ಕಳುಹಿಸಿದ್ದರು. ಅಷ್ಟಕ್ಕೆ ಕೋಪಗೊಂಡ ಆರೋಪಿಗಳು, ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರು. ಜಗಳ ಬಿಡಿಸಲು ಹೋಗಿದ್ದ ಇಮ್ರಾನ್, ಹಲ್ಲೆಯನ್ನು ಪ್ರಶ್ನಿಸಿದ್ದರು. ಆಗ ಮಾತಿನ ಚಕಮಕಿ ನಡೆದು ಅವರ ಮೇಲೂ ಆರೋಪಿಗಳು ಹಲ್ಲೆ ಮಾಡಿದ್ದರು ಎಂದು ಪೊಲೀಸರು ವಿವರಿಸಿದರು.
ಹಲ್ಲೆ ಸಂಬಂಧ ಫೇಸ್ಬುಕ್ನಲ್ಲಿ ಪೋಸ್ಟ್ ಪ್ರಕಟಿಸಿರುವ ಇಮ್ರಾನ್, ‘ಉದ್ಯಾನದಲ್ಲಿದ್ದ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ. ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದರು. ಕನ್ನಡದ ನಾಡಿನಲ್ಲಿ ನಮ್ಮಂಥ ಕನ್ನಡಿಗರಿಗೆ ರಕ್ಷಣೆ ಇಲ್ಲವೆಂಬುದು ಸತ್ಯ. ನನಗಾದ ಪರಿಸ್ಥಿತಿ ಯಾರಿಗೂ ಆಗಬಹುದು. ಎಲ್ಲರೂ ಎಚ್ಚರ ವಹಿಸಿ’ ಎಂದಿದ್ದಾರೆ. ಈ ಪೋಸ್ಟ್ ವೈರಲ್ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.