ಬೆಂಗಳೂರು: ಆಟೊದಲ್ಲಿ ಬಂದ ದುಷ್ಕರ್ಮಿಗಳು ಖಾಸಗಿ ಕಂಪೆನಿಯ ಲೆಕ್ಕಾಧಿಕಾರಿಯೊಬ್ಬರನ್ನು ಅಪಹರಿಸಿ, ಹಿಗ್ಗಾಮುಗ್ಗ ಥಳಿಸಿ ಬಿಟ್ಟು ಹೋಗಿರುವ ಘಟನೆ ಸಿಲ್ವರ್ ಜ್ಯುಬಲಿ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.
ಮಿಷನ್ ರಸ್ತೆಯಲ್ಲಿರುವ ಕಬ್ಬಿಣದ ಬಿಡಿಭಾಗಗಳ ಕಂಪೆನಿಯ ಲೆಕ್ಕಾಧಿಕಾರಿ ಆರ್. ಪಾಟೀಲ್(52) ಅವರು ಸಂಜೆ 6.30ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ನಾಲ್ಕು ಮಂದಿ ದುಷ್ಕರ್ಮಿಗಳು ಅವರನ್ನು ಅಪಹರಿಸಿದ್ದಾರೆ. ಇದನ್ನು ಕಂಡ ಹತ್ತಿರದ ಕಂಪನಿಯ ಸೆಕ್ಯುರಿಟಿ ಗಾರ್ಡ್ ಪಾಟೀಲ್ ಅವರು ಕೆಲಸ ಮಾಡುತ್ತಿದ್ದ ಕಂಪೆನಿಗೆ ಮಾಹಿತಿ ನೀಡಿದ್ದಾರೆ.
ಪಾಟೀಲ್ ಅವರ ಬಳಿ ಹಣ ದೊರೆಯದ ಹಿನ್ನೆಲೆಯಲ್ಲಿ ಅಪಹರಣಕಾರರು ಅವರನ್ನು ಥಳಿಸಿ ಲಾಲ್ಬಾಗ್ ಬಳಿ ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದರು.`ಹಣಕ್ಕಾಗಿ ಅಪಹರಣ ಮಾಡಲಾಗಿದೆ ಎಂದು ತಿಳಿದಿದ್ದೆವು.
ಆದರೆ, ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯೊಬ್ಬರು ಅಪಹರಣ ಮಾಡಿಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಮಹಿಳೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಅಪಹರಣ ಮಾಡಿದ್ದ ಆರೋಪಿಗಳು ಪರಾರಿಯಾಗಿದ್ದಾರೆ~ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು. ಸಿಲ್ವರ್ ಜ್ಯುಬಿಲಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.