ADVERTISEMENT

ವರ್ಗಾವಣೆ ನಿಯಮ ಬದಲು: ಅನುಮತಿ ಬಳಿಕ ಜಾರಿಗೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 20:08 IST
Last Updated 19 ಡಿಸೆಂಬರ್ 2013, 20:08 IST

ಬೆಂಗಳೂರು: ನೌಕರ ದಂಪತಿಯ ವರ್ಗಾವಣೆ ಮೀಸಲು ಪ್ರಮಾಣವನ್ನು ಶೇಕಡ 1ರಿಂದ ಶೇ 3ಕ್ಕೆ ಹೆಚ್ಚಿಸುವ ನಿಯಮವನ್ನು ನ್ಯಾಯಾಲಯದ ಅನು ಮತಿ ಪಡೆದ ಬಳಿಕವೇ ಜಾರಿಗೊಳಿಸ ಬೇಕು ಎಂದು ಹೈಕೋರ್ಟ್‌ ಗುರುವಾರ ಸರ್ಕಾರಕ್ಕೆ ಸೂಚಿಸಿದೆ.

‘ಸರ್ಕಾರಿ ನೌಕರ ದಂಪತಿ ಬೇರೆ ಬೇರೆ ಊರುಗಳಲ್ಲಿ ಕೆಲಸ  ಮಾಡುವುದರಿಂದ ಕಾರ್ಯ ದಕ್ಷತೆ ಕುಸಿಯುವ ಸಾಧ್ಯತೆ ಇರುತ್ತದೆ. ನೌಕರ ದಂಪತಿಯನ್ನು ಪರ ಸ್ಪರ ದೂರ ಮಾಡುವುದರ ಬದಲಿಗೆ, ಸಾಧ್ಯವಾದಷ್ಟು ಹತ್ತಿರ ಇರುವುದಕ್ಕೆ ಅವ ಕಾಶ ನೀಡಿದರೆ ಒಳ್ಳೆಯದಾಗಬಹುದು. ಈ ರೀತಿ ಅವಕಾಶ ಕಲ್ಪಿಸುವುದಕ್ಕೆ ಆದ್ಯತೆ ನೀಡಲು ಯೋಚಿಸ ಬೇಕು’ ಎಂದು ಅದು ಸರ್ಕಾರಕ್ಕೆ ಸಲಹೆ ಮಾಡಿದೆ.

ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ದಂಪತಿಗೆ ಶೇ 1ರಷ್ಟು ಮೀಸಲು ನೀಡುವ ನಿಯಮ ರದ್ದುಪಡಿಸಿ ರುವುದು ಹಾಗೂ ಶಿಕ್ಷಕಿ ಸಿ.ಬಿ.ಲಲಿತಾ ಅವರನ್ನು ಮೈಸೂರು ವಲಯದಿಂದ ಬೆಂಗಳೂರು ವಲಯಕ್ಕೆ ವರ್ಗಾವಣೆ ಮಾಡಿ ಹೈಕೋರ್ಟ್‌ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶ ವನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿದೆ. ನ್ಯಾಯಾಲಯದ ಗಮನಕ್ಕೆ ತರದೇ ವರ್ಗಾವಣೆ ಮೀಸಲು ನಿಯಮ ದಲ್ಲಿ ಬದಲಾವಣೆ ಮಾಡದಂತೆ ಹೈಕೋರ್ಟ್‌ ವಿಭಾಗೀಯ ಪೀಠವು ಈ ಅರ್ಜಿಯ ವಿಚಾರಣೆ ವೇಳೆ ಸೂಚಿಸಿದೆ. 

ನೌಕರ ದಂಪತಿಯ ವರ್ಗಾವಣೆ ಮೀಸಲು ಪ್ರಮಾಣವನ್ನು ಶೇ 3ಕ್ಕೆ ಹೆಚ್ಚಿಸುವ ಸಂಬಂಧ ನಿಯಮಗಳಲ್ಲಿ ತಿದ್ದುಪಡಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ.  ನಿಯಮ ತಿದ್ದುಪಡಿಗೆ ಆರು ವಾರಗಳ ಕಾಲಾವಕಾಶ ನೀಡಬೇಕು ಎಂದು ಸರ್ಕಾರದ ಪರ ವಕೀಲರು ವಿಚಾರಣೆ ವೇಳೆ ನ್ಯಾಯಪೀಠಕ್ಕೆ ಮನವಿ ಮಾಡಿದರು.

ಸರ್ಕಾರದ ನಿಲುವಿಗೆ ಆಕ್ಷೇಪ ವ್ಯಕ್ತ ಪಡಿಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾ.ಎಸ್. ಎನ್. ಸತ್ಯನಾರಾಯಣ ಅವರಿದ್ದ ವಿಭಾ ಗೀಯ ಪೀಠ,  ‘ವರ್ಗಾವಣೆ ನಿಯಮ ಗಳಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ಬಾಕಿ ಇದೆ. ಈ ಹಂತದಲ್ಲಿ ನ್ಯಾಯಾ ಲಯದ ಅನುಮತಿ ಇಲ್ಲದೇ ನೌಕರ ದಂಪತಿ ವರ್ಗಾವಣೆ ಮೀಸಲು ಪ್ರಮಾಣ ವನ್ನು ಹೇಗೆ ಶೇ 3ಕ್ಕೆ ಹೆಚ್ಚಿಸುತ್ತೀರಿ’ ಎಂದು ಪ್ರಶ್ನಿಸಿತು.

ನ್ಯಾಯಾಲಯ ಪರಿಶೀಲಿಸಿದ ಬಳಿಕವೇ ನಿಯಮ ತಿದ್ದುಪಡಿ ಜಾರಿಯಾ ಗಬೇಕು. ಈ ಬಗ್ಗೆ ಸರ್ಕಾರ ನ್ಯಾಯಾ ಲಯಕ್ಕೆ ಸಂಪೂರ್ಣ ಮಾಹಿತಿ ನೀಡ ಬೇಕು. ಸರ್ಕಾರ ದಿಢೀರನೆ ನಿಯಮ ರೂಪಿಸಿದರೆ, ಅದನ್ನು ಪ್ರಶ್ನಿಸಿ ಬೇರೆಯ ವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಇಂತಹ ಬೆಳವಣಿಗೆಗಳು ನಡೆಯಲು ಅವಕಾಶ ನೀಡಬಾರದು ಎಂದು ನ್ಯಾಯಪೀಠ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.