ADVERTISEMENT

ವಿಜಯಶಂಕರ್ ಅಭಿಮತ ಯುನೆಸ್ಕೊದಿಂದ ಪ್ರಯೋಜನ ಇಲ್ಲ

​ಪ್ರಜಾವಾಣಿ ವಾರ್ತೆ
Published 16 ಜೂನ್ 2011, 19:30 IST
Last Updated 16 ಜೂನ್ 2011, 19:30 IST

ಬೆಟ್ಟದಪುರ (ಪಿರಿಯಾಪಟ್ಟಣ):  ಪಶ್ಚಿಮ ಘಟ್ಟಗಳನ್ನು ಯುನೆಸ್ಕೊ ಪರಂಪರೆ ಪಟ್ಟಿಯಲ್ಲಿ ಸೇರಿಸಲು ಒಪ್ಪಿಗೆ ನೀಡುವುದೆಂದರೆ ನಮ್ಮ ಪ್ರಜೆಗಳಿಂದ ಚುನಾಯಿತ ಸರ್ಕಾರದ ಪರಮಾಧಿಕಾರವನ್ನು ಅವರಿಗೆ ಕೊಟ್ಟಂತೆ. ಹಿಂದೆ ಬ್ರಿಟಿಷರೂ ಇದೇ ರೀತಿ ದೇಶಕ್ಕೆ ಕಾಲಿ ಟ್ಟಿದ್ದರು ಎಂದು ಅರಣ್ಯ ಇಲಾಖೆ ಸಚಿವ ವಿಜಯಶಂಕರ್ ಹೇಳಿದರು.

ಬೆಟ್ಟದಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಯುನೆಸ್ಕೊ ಮಾನ್ಯತೆ ಪಡೆಯುವುದರಿಂದ ನಮಗೆ ಯಾವುದೇ ರೀತಿಯ ಪ್ರಯೋಜನವಿಲ್ಲ. ಅವರು ನಮ್ಮ ಅರಣ್ಯ ಅಭಿವೃದ್ಧಿಗೆ ಅಥವಾ ಪಶ್ಚಿಮ ಘಟ್ಟದ ರಕ್ಷಣೆಗೆ ಯಾವುದೇ ಹೊಸದನ್ನು ಕೊಡುತ್ತಿಲ್ಲ.
 
ಒಂದು ವೇಳೆ ಅವರಿಂದ ಮಾನ್ಯತೆ ಪಡೆದರೆ, ಮುಂದೆ ನಾವು ಘಟ್ಟದಲ್ಲಿ ಯಾವುದೇ ರೀತಿಯ ಅರಣ್ಯಸ್ನೇಹಿ ಅಥವಾ ಗಿರಿಜನರ ಸಲುವಾಗಿ ಏನಾದರೂ ಅಭಿವೃದ್ಧಿ ಹಮ್ಮಿಕೊಳ್ಳುವುದು ಕಷ್ಟವಾಗುತ್ತದೆ. ಗಿರಿಜನರ ಹಾಡಿಗಳಲ್ಲಿ ಒಂದು ಬಾವಿ ಅಥವಾ ಬೋರ್‌ವೆಲ್ ತೆಗೆಸಲೂ ಯುನೆಸ್ಕೊದ ಅನುಮತಿಗಾಗಿ ಕಾಯಬೇಕಾದ ಕಾರಣ  ಯುನೆಸ್ಕೊ ಮಾನ್ಯತೆಯನ್ನು ವಿರೋಧಿಸುತ್ತೇವೆ~ ಎಂದರು.

`ಈಗಾಗಲೇ ನಮ್ಮ ಅರಣ್ಯಗಳ ಮೇಲೆ ಪ್ರವಾಸಿಗರು ಮತ್ತು  ರೆಸಾರ್ಟ್‌ಗಳಿಂದಾಗಿ ಒತ್ತಡ ಹೆಚ್ಚಾಗಿದೆ. ಯುನೆಸ್ಕೊ ಪಟ್ಟಿಯಲ್ಲಿ ಪಶ್ಚಿಮ ಘಟ್ಟ ಸೇರಿದರೆ ಜಗತ್ತಿಗೆ ಅದನ್ನು ತೆರೆದಿಟ್ಟಂತಾಗುತ್ತದೆ. ಇದರಿಂದ ಕಾಡುಗಳ ಮೇಲೆ ಮತ್ತೆ ಅನಗತ್ಯ ಒತ್ತಡ ಹೆಚ್ಚುತ್ತದೆ. ಅಮೆರಿಕದಲ್ಲಿ ಯಥೇಚ್ಛ ಕಾಡುಗಳಿವೆ.

ಅವರಿಗೆ ಯುನೆಸ್ಕೊ ಮಾನ್ಯತೆ ಹೊಂದುತ್ತದೆ. ನಮ್ಮ ರಾಜ್ಯದಲ್ಲಿ ಯುನೆಸ್ಕೊ ಆಯ್ಕೆ ಮಾಡಿರುವ ಹತ್ತು ಸ್ಥಳಗಳೂ ನದಿಗಳ ಉಗಮ ಸ್ಥಾನವಾಗಿವೆ. ಇಲ್ಲಿ ಮುಖ್ಯ ಕಾಡುಗಳಿವೆ. ಅವುಗಳನ್ನು ಉಳಿಸಿಕೊಂಡು ಬೆಳೆಸಿಕೊಳ್ಳಲು ನಮ್ಮ ಬಳಿ ಸಾಕಷ್ಟು ಉತ್ತಮ ಕಾನೂನುಗಳು, ಯೋಜನೆಗಳು ಮತ್ತು ಸಂಪನ್ಮೂಲವಿದೆ.
 
ಸರ್ಕಾರದ ಪರಮಾಧಿಕಾರವನ್ನು ಯುನೆಸ್ಕೋಗೆ ಕೊಡಲು ನಮಗೆ ಸಮ್ಮತಿಯಿಲ್ಲ~ ಎಂದರು.  `ಇದಕ್ಕೆ ಸಂಬಂಧಪಟ್ಟ ಕಡತವನ್ನು ಮುಖ್ಯಮಂತ್ರಿಗಳ ಅಭಿಪ್ರಾಯಕ್ಕಾಗಿ ಕಳುಹಿಸಲಾಗಿದ್ದು ಶೀಘ್ರ ನನ್ನ ಕಚೇರಿಗೆ ಅದು ಬರಲಿದೆ~ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.