ಬೆಂಗಳೂರು: ವಿದೇಶಗಳ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪಿಸಿ ತಲಾ ಎರಡು ಕೋಟಿ ರೂಪಾಯಿ ಅನುದಾನ ನೀಡುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಗುರುವಾರ ಇಲ್ಲಿ ಮನವಿ ಮಾಡಿದರು.
ಜರ್ಮನಿಯ ವೂಸ್ಬರ್ಗ್, ಹೈಡಲ್ಬರ್ಗ್, ಮ್ಯೂನಿಕ್ ಮತ್ತು ಆಸ್ಟ್ರಿಯಾದ ವಿಯೆನ್ನಾ ವಿವಿಗಳಲ್ಲಿ ಕನ್ನಡ ಅಧ್ಯಯನ ಪೀಠ ತೆರೆಯಲು ಬಜೆಟ್ನಲ್ಲಿ ಹಣ ನೀಡುವಂತೆ ಕೋರಲಾಗಿದೆ. ಈ ನಾಲ್ಕು ವಿವಿಗಳು ಮಂಗಳೂರು, ಹಂಪಿ, ಮೈಸೂರು ಮತ್ತು ದಾವಣಗೆರೆ ವಿಶ್ವವಿದ್ಯಾಲಯಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಕಾರ್ಯನಿರ್ವಸಲು ವ್ಯವಸ್ಥೆ ಮಾಡಲಾುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವೂಸ್ಬರ್ಗ್ ವಿ.ವಿ.ಯಲ್ಲಿ 16 ಮಂದಿ ಕನ್ನಡ ಕಲಿಯಲು ಮುಂದೆ ಬಂದಿದ್ದಾರೆ. ಬ್ರೋಕನರ್ ಎಂಬ ಅಧ್ಯಾಪಕರು ಚೆನ್ನಾಗಿ ಕನ್ನಡ ಕಲಿಸುತ್ತಾರೆ. ಹೊರ ರಾಜ್ಯಗಳ ಏಳು ವಿವಿಗಳಲ್ಲಿ ಕನ್ನಡ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ 80 ಮಂದಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಾರ್ಷಿಕ ತಲಾ 20 ಸಾವಿರ ರೂಪಾಯಿ ಸಹಾಯಧನ ನೀಡಲಿದ್ದು, ಇದೇ 13ರಂದು ನಗರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು
ವಿದ್ಯಾರ್ಥಿ ವೇತನವನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ವಿತರಿಸಲಿದ್ದಾರೆ. ನಗರದ ಸ್ವಾತಂತ್ರ್ಯ ಉದ್ಯಾನಲ್ಲಿ ಸಮಾರಂಭ ನಡೆಯುವುದು. ಕನ್ನಡ ನುಡಿತೇರು ಜಾಗೃತಿ ಜಾಥಾಬೆಳಗಾವಿಯಲ್ಲಿ 22ರಿಂದ 27ರವರೆಗೆ ನಡೆಯಲಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.