ಬೆಂಗಳೂರು: ವಿದ್ಯುತ್ ದರ ಏರಿಕೆ ಸಂಬಂಧ ಪ್ರಸ್ತಾವ ಸಲ್ಲಿಸಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ), ಡಿಸೆಂಬರ್ 10ರ ವರೆಗೆ ಎಸ್ಕಾಂಗಳಿಗೆ ಕಾಲಾವಕಾಶ ನೀಡಿದೆ. ಪೂರ್ವ ನಿಗದಿಯಂತೆ ನ.30ರೊಳಗೆ ದರ ಏರಿಕೆ ಸಂಬಂಧ ಕಂಪೆನಿಗಳು ಪ್ರಸ್ತಾವ ಸಲ್ಲಿಸಬೇಕಾಗಿತ್ತು.
ಆದರೆ, ದರ ಏರಿಕೆ ಪ್ರಸ್ತಾವವನ್ನು ಅಂತಿಮಗೊಳಿಸಲು ಇನ್ನೂ ಸಾಧ್ಯವಾಗದ ಕಾರಣ ಕಂಪೆನಿಗಳು ಕಾಲಾವಕಾಶ ಕೇಳಿ ಶುಕ್ರವಾರ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದವು. ಇದನ್ನು ಮಾನ್ಯ ಮಾಡಿದ ಆಯೋಗ ಇದೇ 10ರ ಒಳಗೆ ಪ್ರಸ್ತಾವ ಸಲ್ಲಿಸುವಂತೆ ಸೂಚಿಸಿದೆ.
ಮೂಲಗಳ ಪ್ರಕಾರ ಯೂನಿಟ್ಗೆ 60 ಪೈಸೆ ಹೆಚ್ಚಳ ಮಾಡುವಂತೆ ಕೋರಿ ಕಂಪೆನಿಗಳು ಪ್ರಸ್ತಾವ ಸಲ್ಲಿಸುವ ಸಾಧ್ಯತೆ ಇದೆ. ದರ ಹೆಚ್ಚಳ ಕೋರಿ ಪ್ರಸ್ತಾವ ಸಲ್ಲಿಸಿ ಆಯೋಗ ಒಪ್ಪಿದರೂ, 2013ರ ಏ. 1ರಿಂದ ದರ ಪರಿಷ್ಕರಣೆ ಜಾರಿಗೆ ಬರಲಿದೆ. ಯೂನಿಟ್ಗೆ 70ರಿಂದ 80 ಪೈಸೆ ಹೆಚ್ಚಳ ಮಾಡುವಂತೆ ಕೋರಿ ಪ್ರಸ್ತಾವ ಸಲ್ಲಿಸುವ ಉದ್ದೇಶವನ್ನು ಕೆಲ ಕಂಪೆನಿಗಳು ಹೊಂದಿದ್ದವು.
ಆದರೆ, ಬೆಸ್ಕಾಂ ಮತ್ತು ಮೆಸ್ಕಾಂ ಕಂಪೆನಿಗಳು ಇದು ಹೆಚ್ಚು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದವು. ಕೊನೆಗೆ ಏಕರೂಪದಲ್ಲಿ ದರ ಏರಿಕೆ ಪ್ರಸ್ತಾವ ಸಲ್ಲಿಸಬೇಕೆಂಬ ತೀರ್ಮಾನಕ್ಕೆ ಬರಲಾಯಿತು. ಪರಿಷ್ಕೃತ ದರಪಟ್ಟಿ ಸಿದ್ಧಪಡಿಸಬೇಕಾಗಿರುವುದರಿಂದ ಕಾಲಾವಕಾಶ ಕೇಳಲಾಗಿದೆ ಎಂದು ಗೊತ್ತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.