ADVERTISEMENT

ವಿಶೇಷ ಕೃಷಿ ವಲಯಕ್ಕೆ ಮಠಾಧೀಶರ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST

ಬೆಳಗಾವಿ:  ಕೃಷಿಗೆ ಪ್ರೋತ್ಸಾಹಿಸಲು `ವಿಶೇಷ ಕೃಷಿ ವಲಯ~ ಸ್ಥಾಪಿಸಲು ಸರ್ಕಾರದ ಮನವೊಲಿಸುವುದು ಸೇರಿದಂತೆ ವಿವಿಧ ನಿರ್ಣಯಗಳನ್ನು ಸೋಮವಾರ ಇಲ್ಲಿ `ಶ್ರೀಗಳ ನಡಿಗೆ ಕೃಷಿಯ ಕಡೆಗೆ~ ಕೃಷಿ ಅಭಿವೃದ್ಧಿ ಚಿಂತನಾ ಸಭೆಯ ಸಮಾರೋಪದಲ್ಲಿ ವಿವಿಧ ಮಠಾಧೀಶರು ಅಂಗೀಕರಿಸಿದರು.

ನಾಗನೂರ ರುದ್ರಾಕ್ಷಿ ಮಠ ಹಾಗೂ ಮಹಾತ್ಮ ಗಾಂಧಿ ವಿಶ್ವಸ್ಥ ಮಂಡಳಿ ಆಶ್ರಯದಲ್ಲಿ ನಗರದಲ್ಲಿ ಹಮ್ಮಿಕೊಂಡಿದ್ದ ಚಿಂತನಾ ಸಭೆಯ ಸಮಾರೋಪದಲ್ಲಿ ನಾಗನೂರ ಸಿದ್ಧರಾಮ ಸ್ವಾಮೀಜಿ ಅವರು 13 ನಿರ್ಣಯಗಳನ್ನು ಮಂಡಿಸಿದರು.

ನಾಡಿನ ಕೃಷಿ ಕ್ಷೇತ್ರ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮಠಗಳಲ್ಲೂ ಕೃಷಿ ಚಟುವಟಿಕೆ ಕೈಗೊಳ್ಳುವ ಮೂಲಕ ರೈತರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲು ಮತ್ತು ರೈತರಿಗೆ ಮಾನಸಿಕ ಬೆಂಬಲ ನೀಡಲು `ಕೃಷಿ ಪ್ರವಚನ~ ನಡೆಸಲು ಮಠಾಧೀಶರು ನಿರ್ಧರಿಸಿದರು.

ಮಠಾಧೀಶರು ತಮ್ಮ ಮಠಗಳಲ್ಲಿನ ಸೌಕರ್ಯಗಳನ್ನು ಬಳಸಿಕೊಂಡು ಕೃಷಿಯ ವಿವಿಧ ಆಯಾಮಗಳನ್ನು ಸ್ವತಃ ಮಾಡಿ ತೋರಿಸುವುದು, ಬೀಜ ಹಾಗೂ ಸಸಿಗಳನ್ನು ತಯಾರಿಸಿ ಆಶೀರ್ವಾದ ರೂಪದಲ್ಲಿ ರೈತರಿಗೆ ಪೂರೈಸುವುದು, ಧಾರ್ಮಿಕ ಸಂಸ್ಥೆಗಳು ಸ್ಥಳೀಯವಾಗಿ ಸಿಗುವ ತಳಿಗಳನ್ನು ಹಾಗೂ ಜೀವ ಸಂಕುಲವನ್ನು ಸಂರಕ್ಷಿಸಿ ರೈತರಿಗೆ ಸಿಗುವಂತೆ ಮಾಡುವುದು, ಗ್ರಾಮೀಣ ಪ್ರದೇಶಗಳಲ್ಲಿ ರೈತರ ಮಕ್ಕಳಿಗೆ ಕೃಷಿಯ ಬಗ್ಗೆ ತರಬೇತಿ ನೀಡಲು ಕೃಷಿ ಪಾಠಶಾಲೆಗಳನ್ನು ಸ್ಥಾಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ವಿಜಾಪುರದ ಸಿದ್ಧೇಶ್ವರ ಸ್ವಾಮೀಜಿ, ಕನ್ನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ 20ಕ್ಕೂ ಹೆಚ್ಚು ಮಠಾಧೀಶರು ಚಿಂತನ ಸಭೆಯಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.