ADVERTISEMENT

‘ವೈರಿಗಳು ಒಗ್ಗೂಡಿದರೆ ನನಗೇ ಲಾಭ’

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 20:25 IST
Last Updated 26 ಅಕ್ಟೋಬರ್ 2017, 20:25 IST

ಬೆಂಗಳೂರು: ‘ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನ ರಾಜಕೀಯ ವೈರಿಗಳೆಲ್ಲಾ ಒಂದಾದರೆ ಚುನಾವಣೆಯಲ್ಲಿ ನನಗೇ ಲಾಭ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಹೇಳಿದರು.

‘ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಈ ಬಾರಿ ಗೆಲ್ಲಲು ಸಾಧ್ಯವಿಲ್ಲ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರಲ್ಲಾ’ ಎಂಬ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು.

‘ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾರು ಗೆಲ್ಲಬೇಕು ಎಂಬುದನ್ನು ಅಲ್ಲಿನ ಮತದಾರರು ನಿರ್ಧರಿಸುತ್ತಾರೆ. ಎರಡು ಲಕ್ಷಕ್ಕೂ ಹೆಚ್ಚಿನ ಮತದಾರರಿದ್ದು ಅವರೇನು ಕುಮಾರಸ್ವಾಮಿ ಅವರ ಜೇಬಿನಲ್ಲಿ ಇಲ್ಲ’ ಎಂದರು.

ADVERTISEMENT

‘ನನ್ನ ರಾಜಕೀಯ ವೈರಿಗಳೆಲ್ಲ ಒಂದಾಗಬೇಕು. ಎಲ್ಲರೂ ಸಿದ್ದರಾಮಯ್ಯ ಅವರನ್ನು ಸೋಲಿಸುವುದಕ್ಕಾಗಿಯೇ ಒಂದಾಗಿದ್ದಾರೆ ಎಂದು ಅಲ್ಲಿನ ಮತದಾರರು ಭಾವಿಸಿ ಮತ್ತೆ ನನ್ನನ್ನು ಗೆಲ್ಲಿಸುತ್ತಾರೆ. ಆ ಬಗ್ಗೆ ಅನುಮಾನವಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಗುಜರಾತ್ ಚುನಾವಣಾ ಪ್ರಚಾರಕ್ಕೆ ಹೋಗುತ್ತೀರಾ’ ಎಂಬ ಪ್ರಶ್ನೆಗೆ, ‘ನನಗೆ ಕರ್ನಾಟಕ ನೋಡಿಕೊಂಡರೆ ಸಾಕಾಗಿದೆ’ ಎಂದು ಉತ್ತರಿಸಿದರು.

‘ಪ್ರಧಾನಿ ಮೋದಿ ಅವರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿಯೇ ಚುನಾವಣಾ ಆಯೋಗ ಕೊಂಚ ವಿಳಂಬವಾಗಿ ಗುಜರಾತ್ ಚುನಾವಣೆ ದಿನಾಂಕ ಘೋಷಿಸಿದೆ.

ಅಲ್ಲಿ ಭಾಷಣ ಮಾಡಲು ಮತ್ತು ಯೋಜನೆಗಳನ್ನು ಘೋಷಿಸಲು ಸಾಕಷ್ಟು ಸಮಯ ನೀಡಿದೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.