ADVERTISEMENT

ಶತಾಯುಷಿ ಏಣಗಿಗೆ ಆತ್ಮೀಯ ಸನ್ಮಾನ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 19:50 IST
Last Updated 12 ಡಿಸೆಂಬರ್ 2012, 19:50 IST

ಬೆಂಗಳೂರು: `ಕನ್ನಡ ರಂಗಭೂಮಿಯಲ್ಲಿ ಅಶ್ಲೀಲತೆ ಸಲ್ಲದು. ನಾನು ರಂಗಭೂಮಿಯಲ್ಲಿ ಲಜ್ಜಾಹೀನವಾದ ಪ್ರದರ್ಶನಗಳಲ್ಲಿ ಭಾಗವಹಿಸುತ್ತಲೇ ಇರಲಿಲ್ಲ. ನನ್ನ ಶಿಷ್ಯರಿಗೂ ಇಂತಹ ಪ್ರದರ್ಶನಗಳಲ್ಲಿ ಭಾಗವಹಿಸದಂತೆ ತಿಳಿಸಿದ್ದೆ' ಎಂದು ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪ ನೆನಪಿಸಿಕೊಂಡರು.
ಬಾಳಪ್ಪ ಅವರಿಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಸರ್ವಜ್ಞ ಸಾಂಸ್ಕೃತಿಕ ವೇದಿಕೆಯ ವತಿಯಿಂದ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಅಭಿನಂದನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

`ನನ್ನನ್ನು ಬೆಳೆದು ಪೋಷಿಸಿದ್ದು ರಂಗಭೂಮಿ. ಬರುವಾಗ ಸಾಮಾನ್ಯ ಕಲಾವಿದನಾಗಿದ್ದೆ. ಈಗ ಈ ಹಂತಕ್ಕೆ ಬಂದಿದ್ದೇನೆ. ರಂಗಭೂಮಿಯಲ್ಲಿ ಶ್ರೇಷ್ಠ ಕಲಾವಿದನಾಗಿ ಹೊರಹೊಮ್ಮಲು ಕಾರಣರಾದ ಗುರುಗಳು, ಸಹ ಕಲಾವಿದರು ಹಾಗೂ ರಂಗಪ್ರೇಮಿಗಳಿಗೆ ಋಣಿ' ಎಂದು ಅವರು ಸ್ಮರಿಸಿಕೊಂಡರು.
ಹಿರಿಯ ಸಾಹಿತಿ ಜರಗನಹಳ್ಳಿ ಶಿವಶಂಕರ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಆಪ್ತ ಕಾರ್ಯದರ್ಶಿ ಎಂ.ವಿ.ದೇವಶೆಟ್ಟಿಗೌಡ, ಜೆಡಿಎಸ್ ಹಿಂದುಳಿದ ವರ್ಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಹುಚ್ಚಪ್ಪ, ವೇದಿಕೆಯ ಗೌರವಾಧ್ಯಕ್ಷ ಬಿ.ನಂಜುಂಡಯ್ಯ, ರಾಜ್ಯ ಘಟಕದ ಅಧ್ಯಕ್ಷ ಕೆ.ವೈ.ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಚಂದ್ರಪ್ಪ, ಕೆ.ಎಸ್.ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.