ADVERTISEMENT

ಶಾಸಕ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 19:30 IST
Last Updated 12 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಬೇಟೆಗಾರರ ಮೇಲೆ ಗುಂಡು ಹಾರಿಸಿ ಕರ್ತವ್ಯ ಪ್ರಜ್ಞೆ ಮೆರೆದ ಎಚ್.ಡಿ.ಕೋಟೆಯ ಅರಣ್ಯ ಕಾವಲುಗಾರ ಗೋವಿಂದ ಅವರನ್ನು ಅಮಾನತು ಮಾಡಬೇಕೆಂದು ಒತ್ತಡ ಹೇರುತ್ತಿರುವ ಕಾಂಗ್ರೆಸ್ ಶಾಸಕ ಚಿಕ್ಕಣ್ಣ ಅವರ ವಿರುದ್ಧ ಪರಿಸರವಾದಿಗಳು ಹಾಗೂ ವನ್ಯಜೀವಿ ಪ್ರೇಮಿಗಳು ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂತರಸಂತೆ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗೋವಿಂದ ಅವರು ಮರಗಳ್ಳರ ಮೇಲೆ ಗುಂಡು ಹಾರಿಸಿದ್ದರು. ಪ್ರಾಮಾಣಿಕವಾಗಿ ಕೆಲಸ ಮಾಡಿದ ಸಿಬ್ಬಂದಿಯನ್ನು ಬೆಂಬಲಿಸುವ ಬದಲು ಅವರನ್ನು ಅಮಾನತು ಮಾಡಬೇಕೆಂದು ಚಿಕ್ಕಣ್ಣ ಪ್ರತಿಭಟನೆ ನಡೆಸಿದ್ದಾರೆ. ಅಮಾನತು ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

`ಎಚ್.ಡಿ.ಕೋಟೆ ಸುತ್ತಮುತ್ತ ಕಾಡುಗಳ್ಳರ ಹಾವಳಿ ಹೆಚ್ಚುತ್ತಿದೆ. ವಿನಾಶದ ಅಂಚಿನಲ್ಲಿರುವ ಹುಲಿ ಸಂತತಿಯನ್ನು ರಕ್ಷಿಸುವ ಅಗತ್ಯ ಇದೆ. ಟಿಂಬರ್ ಮಾಫಿಯಾ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಆದರೆ ಶಾಸಕರು ದುಷ್ಕರ್ಮಿಗಳನ್ನು ಬೆಂಬಲಿಸುತ್ತಿದ್ದಾರೆ.

ಇಂತಹ ಯತ್ನವನ್ನು ಅವರು ಬಿಡಬೇಕು~ ಎಂದು ವನ್ಯಜೀವಿ ಪ್ರೇಮಿ ಕಿರಣ್ ಆಗ್ರಹಿಸಿದರು. `ಗೋವಿಂದ ಅವರು ಒಬ್ಬ ನಿಷ್ಠಾವಂತ ಉದ್ಯೋಗಿಯಾಗಿದ್ದಾರೆ. ಈ ಹಿಂದೆ ಅವರು ಕಾಡುಗಳ್ಳರು ನಡೆಸಿದ ಗುಂಡಿನ ದಾಳಿಗೆ ತುತ್ತಾಗಿದ್ದರು. ಆದರೂ ಎದೆಗುಂದದೆ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಂತಹ ಸಿಬ್ಬಂದಿಗೆ ರಕ್ಷಣೆ ನೀಡಬೇಕು~ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.