ಬೆಂಗಳೂರು: ಶ್ರವಣಬೆಳಗೊಳದಲ್ಲಿ ಬಾಹುಬಲಿ ಮೂರ್ತಿ ಇರುವ ದೊಡ್ಡಬೆಟ್ಟದಲ್ಲಿ ಹಳೆಯ ಮತ್ತು ಹೊಸ ಶಿಲಾಯುಗದ ಕುರುಹುಗಳು ಪತ್ತೆಯಾಗಿವೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಎಸ್.ರಂಗಸ್ವಾಮಿ ಅವರು ಈ ಕುರುಹುಗಳನ್ನು ಪತ್ತೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಂಗಸ್ವಾಮಿ, ‘ಶ್ರವಣಬೆಳಗೊಳದ ದೊಡ್ಡಬೆಟ್ಟದ ಹಿಂಭಾಗದಲ್ಲಿನ ನಾಗಯ್ಯನಕೊಪ್ಪಲಿನಲ್ಲಿ ಸಂಶೋಧನೆ ನಡೆಸಿದಾಗ ಈ ಕುರುಹುಗಳು ಪತ್ತೆಯಾಗಿವೆ. ಕೈಕೊಡಲಿ, ಕೆಂಪು ಹಾಗೂ ಕಪ್ಪು ಬಣ್ಣದ ಮಡಿಕೆ ಚೂರುಗಳು, ಹೂಜಿಯ ಕಂಠಗಳು ಸಿಕ್ಕಿವೆ. 10 ವರ್ಷ ಸಂಶೋಧನೆ ನಡೆಸಿದ್ದೇನೆ. ದೊಡ್ಡಬೆಟ್ಟದಲ್ಲಿ ಅರೆಯುವ ಗುಂಡುಕಲ್ಲು, ಕವಣೆ ಕಲ್ಲು, ಬೂದಿ ದಿಬ್ಬಗಳು, ಸಮಾಧಿಗಳು ಪತ್ತೆಯಾಗಿವೆ ಎಂದರು.
ಕರ್ನಾಟಕ ಇತಿಹಾಸ ಅಕಾಡೆಮಿ ಉಪಾಧ್ಯಕ್ಷ ಡಾ.ಎಚ್.ಎಸ್.ಗೋಪಾಲ ರಾವ್ ಅವರು ಮಾತನಾಡಿ, ‘ಕ್ರಿ.ಪೂ 3ನೇ ಶತಮಾನದಲ್ಲಿ ಚಂದ್ರಗುಪ್ತ ಮೌರ್ಯ ಶ್ರವಣಬೆಳಗೊಳಕ್ಕೆ ಬಂದ ನಂತರದ ಇತಿಹಾಸ ಮಾತ್ರ ದಾಖಲಾಗಿದೆ.
ಕವಿ ಎಲ್.ಎನ್.ಮುಕುಂದರಾಜ್ ಮಾತನಾಡಿ, ‘ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ಅಪಾರ. ದೊಡ್ಡಬೆಟ್ಟದಲ್ಲಿ ಪುರಾತತ್ವ ಇಲಾಖೆ ಉತ್ಖನನ ಕೈಗೊಂಡರೆ ಇನ್ನಷ್ಟು ಶಾಸನಗಳು ಸಿಗುವ ಸಾಧ್ಯತೆ ಇದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.