ಬೆಂಗಳೂರು: `ಸಮಾಜಮುಖಿ~ ವ್ಯಕ್ತಿಗಳು ಸರ್ಕಾರಿ ಆಡಳಿತ ಯಂತ್ರವನ್ನು ಅರ್ಥಮಾಡಿಕೊಳ್ಳುವ, ತಮ್ಮ ಹೊಸ ಚಿಂತನೆಗಳನ್ನು ಅದಕ್ಕೆ ನೀಡುವ ಯೋಜನೆಯೊಂದಕ್ಕೆ ಕರ್ನಾಟಕ ಜ್ಞಾನ ಆಯೋಗ ಶೀಘ್ರವೇ ಚಾಲನೆ ನೀಡಲಿದೆ.
ಹೊಸ ಚಿಂತನೆಗಳುಳ್ಳ ಯುವಕರನ್ನು `ಜ್ಞಾನ ಫೆಲೋಷಿಪ್~ ಹೆಸರಿನ ಈ ಯೋಜನೆಯಡಿ ಸರ್ಕಾರಿ ಇಲಾಖೆಗಳೊಂದಿಗೆ ಕೆಲಸ ಮಾಡುವಂತೆ ಉತ್ತೇಜಿಸಲಾಗುವುದು, ಈ ಮೂಲಕ ವಿವಿಧ ಇಲಾಖೆಗಳ ಯೋಜನೆಗಳಿಗೆ ಹೊಸ ಶಕ್ತಿ ತುಂಬಲಾಗುವುದು.
ಆಸಕ್ತರಿಂದ ಜ್ಞಾನ ಫೆಲೋಷಿಪ್ಗೆ ಅರ್ಜಿ ಆಹ್ವಾನಿಸಲು ಗುರುವಾರ ನಡೆದ ಕರ್ನಾಟಕ ಜ್ಞಾನ ಆಯೋಗದ 12ನೇ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಭೆಯ ನಂತರ ಸುದ್ದಿಗಾರರಿಗೆ ಈ ಯೋಜನೆಯ ಕುರಿತು ಮಾಹಿತಿ ನೀಡಿದ ಆಯೋಗದ ಅಧ್ಯಕ್ಷ ಡಾ.ಕೆ. ಕಸ್ತೂರಿ ರಂಗನ್, `ಸರ್ಕಾರಿ ಆಡಳಿತ ಯಂತ್ರ ಹೇಗೆ ಕೆಲಸ ಮಾಡುತ್ತದೆ ಎಂದು ಅರ್ಥಮಾಡಿಕೊಳ್ಳುವ ಅವಕಾಶ ನೀಡಿ, ಅವರಲ್ಲಿರುವ ಹೊಸ ಆಲೋಚನೆಗಳಿಂದ ಇಲಾಖೆಗಳ ಕಾರ್ಯಚಟುವಟಿಕೆಯಲ್ಲಿ ಬದಲಾವಣೆ ತರುವುದು ಈ ಯೋಜನೆ ಉದ್ದೇಶ~ ಎಂದು ತಿಳಿಸಿದರು.
ಈ ಯೋಜನೆಯಡಿ ಫೆಲೊಗಳಿಗೆ ಕೆಲಸ ಮಾಡುವ ಅವಕಾಶ ನೀಡಲು ರಾಜ್ಯ ಸರ್ಕಾರದ 26 ಇಲಾಖೆಗಳು ಒಲವು ತೋರಿವೆ. ಆರಂಭದಲ್ಲಿ 15 ಇಲಾಖೆಗಳಲ್ಲಿ ಈ ಯೋಜನೆಯನ್ನು ಆರಂಭಿಸಲಾಗುವುದು. ಜ್ಞಾನ ಫೆಲೋಷಿಪ್ ಅಡಿ ಜೂನ್ನಲ್ಲಿ ಕೆಲಸ ಆರಂಭವಾಗುತ್ತದೆ. ಸದ್ಯದಲ್ಲೇ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗುವುದು ಎಂದು ಜ್ಞಾನ ಆಯೋಗದ ಸದಸ್ಯ ಕಾರ್ಯದರ್ಶಿ ಪ್ರೊ.ಎಂ.ಕೆ. ಶ್ರೀಧರ್ ತಿಳಿಸಿದರು.
ಈ ಯೋಜನೆಯಡಿ 28-40 ವರ್ಷ ವಯಸ್ಸಿನ ವೃತ್ತಿಪರ ವ್ಯಕ್ತಿಗಳನ್ನು ಫೆಲೊಷಿಪ್ಗೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಫೆಲೊಗಳಿಗೆ ಒಂದು ವಾರ ಕಾಲ ಪುನರ್ಮನನ ಶಿಬಿರ ನಡೆಸಿ ನಂತರ ಅವರನ್ನು ವಿವಿಧ ಇಲಾಖೆಗಳ ಕೆಲಸಕ್ಕೆ ವರ್ಗಾಯಿಸಲಾಗುತ್ತದೆ. ಇಲ್ಲಿ ಕೆಲಸ ಮಾಡುವ ವ್ಯಕ್ತಿ ಸರ್ಕಾರದ ಆಗುಹೋಗುಗಳ ಬಗ್ಗೆ ಅರಿವು ಪಡೆಯುತ್ತಲೇ ಇಲಾಖೆಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವತ್ತ ಕೆಲಸ ಮಾಡುವ ಅವಕಾಶವೂ ದೊರೆಯುತ್ತದೆ ಎಂದು ಕಸ್ತೂರಿ ರಂಗನ್ ತಿಳಿಸಿದರು.
ಜ್ಞಾನ ಆಯೋಗದ ಸಮಿತಿಯೊಂದು ಫೆಲೊಗಳನ್ನು ಆಯ್ಕೆ ಮಾಡುತ್ತದೆ. ಫೆಲೊಷಿಪ್ನ ಅವಧಿ ಮುಗಿದ ನಂತರವೂ ಅಭ್ಯರ್ಥಿಗಳಿಗೆ ಸರ್ಕಾರದೊಂದಿಗೆ ಕೆಲಸ ಮಾಡುವ ಅವಕಾಶ ಇರುತ್ತದೆ. ಅದಾಗದಿದ್ದರೆ ಫೆಲೊಗಳು ತಮ್ಮ ಮಾತೃ ಸಂಸ್ಥೆಗೆ ಹಿಂತಿರುಗಿ ಮೊದಲಿನ ಕೆಲಸವನ್ನೇ ಮುಂದುವರಿಸುವ ಆಯ್ಕೆಯಿದೆ ಎಂದು ವಿವರಿಸಿದರು.
ಇದೇ ಆಗಸ್ಟ್ಗೆ ಜ್ಞಾನ ಆಯೋಗದ ಅವಧಿ ಮುಗಿಯಲಿದೆ, ಆ ನಂತರ ಆಯೋಗದ ಅವಶ್ಯಕತೆ ಇದೆಯೇ ಇಲ್ಲವೇ ಎಂಬ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಆಯೋಗದ ಇಲ್ಲಿಯವರೆಗಿನ ಕಾರ್ಯಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ ಎಂದರು.
`ಕಣಜ~ ಪೋರ್ಟಲ್ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆಯೋಗದ ಕಾರ್ಯಚಟುವಟಿಕೆಗಳನ್ನು ಸಾರ್ವಜನಿಕರ ಪರಿಶೀಲನೆಗೆ (ಸೋಶಿಯಲ್ ಆಡಿಟಿಂಗ್) ಒಪ್ಪಿಸುವ ಯೋಚನೆ ಇದೆ ಎಂದು ಅವರು ಮಾಹಿತಿ ನೀಡಿದರು.
`ಕರ್ನಾಟಕ ಜ್ಞಾನ ಸಮಾಜದ ಬಗ್ಗೆ ಅಧ್ಯಯನ~ ಮತ್ತು ರಾಜ್ಯದ ಯುವ ಸಮುದಾಯದ ನಿರೀಕ್ಷೆ, ಆಕಾಂಕ್ಷೆಗಳ ಕುರಿತ ಸಮೀಕ್ಷೆಗಳನ್ನು ಸಭೆಯಲ್ಲಿ ಮಂಡಿಸಲಾಯಿತು. ಟಿ.ವಿ. ಮೋಹನದಾಸ್ ಪೈ, ಜೈನ್ ವಿ.ವಿ.ಯ ಸಹ ಕುಲಪತಿ ಡಾ. ಸಂದೀಪ್ ಶಾಸ್ತ್ರಿ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.