ಚಿಕ್ಕಮಗಳೂರು: ಸಂಘ ಪರಿವಾರದ ನೇತೃತ್ವದಲ್ಲಿ ನಡೆಯುತ್ತಿರುವ ದತ್ತಮಾಲಾ ಅಭಿಯಾನ ಮತ್ತು ದತ್ತ ಜಯಂತಿ ಅಂಗವಾಗಿ ಭಾನುವಾರ ನಗರದಲ್ಲಿ ದತ್ತ ಮಾಲಾಧಾರಿಗಳು ವಿಜೃಂಭಣೆಯ ಶೋಭಾಯಾತ್ರೆ ನಡೆಸಿದರು.
ನಗರದ ಕಾಮಧೇನು ಗಣಪತಿ ದೇವಾಲಯದಿಂದ ಆರಂಭವಾದ ಶೋಭಾಯಾತ್ರೆ ಬಸವನಹಳ್ಳಿ ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ ಮಾರ್ಗವಾಗಿ ಆಜಾದ್ ಪಾರ್ಕ್ ವೃತ್ತದವರೆಗೂ ನಡೆಯಿತು. ಕೇಸರಿ ಪಂಚೆ, ಕೇಸರಿ ಶಲ್ಯ ಧರಿಸಿದ್ದ ದತ್ತ ಮಾಲಾಧಾರಿಗಳು ಕೈಯಲ್ಲಿ ಭಗವಾಧ್ವಜ ಹಿಡಿದು, ದತ್ತ ಭಜನೆ ಮಾಡುತ್ತಾ ಶೋಭಾಯಾತ್ರೆ ನಡೆಸಿದರು.
ಹೂವಿನಿಂದ ಅಲಂಕರಿಸಿದ ವಾಹನದಲ್ಲಿ ಪ್ರತಿಷ್ಠಾಪಿಸಿದ್ದ ದತ್ತಾತ್ರೇಯರ ಮೂರ್ತಿ ಮತ್ತು ಗ್ರಾಮ ದೇವತೆಗಳ ಮೆರವಣಿಗೆ ಮಾಡಲಾಯಿತು. ಈ ಬಾರಿ 5 ಗ್ರಾಮ ದೇವತೆಗಳು ಮೆರವಣಿಗೆಯಲ್ಲಿದ್ದವು.
ದತ್ತಾತ್ರೇಯರ ಉತ್ಸವ ಮೂರ್ತಿಗೆ ಮಾರ್ಗದುದ್ದಕ್ಕೂ ಅಲ್ಲಲ್ಲಿ ಭಕ್ತಾದಿಗಳು ಹೂವು, ಹಣ್ಣು, ತೆಂಗಿನ ಕಾಯಿ ಅರ್ಪಿಸಿ, ಪೂಜೆ ಸಲ್ಲಿಸಿದರು. ಶೋಭಾಯಾತ್ರೆ ಸಾಗುತ್ತಿದ್ದಾಗ ನಗರ ನಿವಾಸಿಗಳು ರಸ್ತೆಯ ಇಕ್ಕೆಲಗಳ ಅಂಗಡಿ ಮುಂಗಟ್ಟುಗಳ ಮುಂದೆ ಹಾಗೂ ಎತ್ತರದ ಕಟ್ಟಡಗಳ ಮೇಲೆ ನಿಂತು ಯಾತ್ರೆ ಕಣ್ತುಂಬಿಕೊಂಡರು.
ದತ್ತ ಜಯಂತಿಗೆ ಮುನ್ನಾ ದಿನ ನಡೆಯುವ ಶೋಭಾಯಾತ್ರೆಯಲ್ಲಿ ನಗರ ಸೇರಿದಂತೆ ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದ ಸಂಘ ಪರಿವಾರದ ಕಾರ್ಯಕರ್ತರು ಮತ್ತು ದತ್ತ ಮಾಲಾಧಾರಿಗಳು ಪಾಲ್ಗೊಂಡಿದ್ದರು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದವರ ಸಂಖ್ಯೆ ಕಡಿಮೆ ಇತ್ತು.
ಶೋಭಾಯಾತ್ರೆಯ ಮಾರ್ಗದುದ್ದಕ್ಕೂ ಪೊಲೀಸ್ ಬಿಗಿಭದ್ರತೆ ಕಲ್ಪಿಸಲಾಗಿತ್ತು. ಯಾತ್ರೆಗಾಗಿ ಸಂಜೆ 4 ಗಂಟೆಯಿಂದ 7 ಗಂಟೆವರೆಗೂ ಎಂ.ಜಿ.ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಆಜಾದ್ ಪಾರ್ಕ್ ವೃತ್ತದಲ್ಲಿ ಧಾರ್ಮಿಕ ಸಭೆ ನಡೆಯಿತು.
ಬಜರಂಗದಳ ರಾಜ್ಯ ಸಂಚಾಲಕ ಸೂರ್ಯನಾರಾಯಣ, ಶಾಸಕ ಸಿ.ಟಿ.ರವಿ, ಸಂಘ ಪರಿವಾರದ ಮುಖಂಡರಾದ ಶಿವಶಂಕರ್, ಯೋಗೀಶ್ ರಾಜ್ ಅರಸ್, ಪ್ರೇಮ್ ಕಿರಣ್, ಸಿ.ಆರ್.ಪ್ರೇಮ್ಕುಮಾರ್, ಎಚ್.ಡಿ.ತಮ್ಮಯ್ಯ, ವರಸಿದ್ಧಿ ವೇಣುಗೋಪಾಲ್ ಮತ್ತಿತರರು ಶೋಭಾಯಾತ್ರೆ ಮುಂಚೂಣಿಯಲ್ಲಿದ್ದರು.
ಇಂದು ಪಾದುಕೆ ದರ್ಶನ: ಒಂದು ವಾರದಿಂದ ದತ್ತ ಮಾಲೆ ಧರಿಸಿ ವ್ರತಧಾರಿಗಳಾಗಿರುವ ದತ್ತ ಭಕ್ತರು ಸೋಮವಾರ ಬೆಳಿಗ್ಗೆ ದತ್ತ ಪೀಠಕ್ಕೆ ಭೇಟಿ ನೀಡಿ, ದತ್ತ ಗುಹೆಯಲ್ಲಿರುವ ದತ್ತಾತ್ರೇಯರ ಪಾದುಕೆಗಳ ದರ್ಶನ ಪಡೆಯಲಿದ್ದಾರೆ. ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಪಾದುಕೆಗಳ ದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.