ADVERTISEMENT

ಸಂವಿಧಾನ ಬದಲಾಯಿಸಲು ಬಿಡುವುದಿಲ್ಲ: ರಾಹುಲ್ ಗಾಂಧಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 11:20 IST
Last Updated 24 ಮಾರ್ಚ್ 2018, 11:20 IST
ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
ರಾಹುಲ್ ಗಾಂಧಿ (ಸಂಗ್ರಹ ಚಿತ್ರ)   

ಚಾಮರಾಜನಗರ: ದೇಶದ ಸಂವಿಧಾನದ ಮೇಲೆ ಆಕ್ರಮಣ ನಡೆಸಲು ಬಿಜೆಪಿ ಮುಂದಾಗಿದ್ದು, ಆ ಪ್ರಯತ್ನವನ್ನು ಒಗ್ಗಟ್ಟಿನಿಂದ ಎದುರಿಸಬೇಕಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಶನಿವಾರ ಹೇಳಿದರು.

ಇಲ್ಲಿನ ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಜನಾಶೀರ್ವಾದ ಯಾತ್ರೆ ಸಮಾವೇಶದಲ್ಲಿ ಅವರು ಮಾತನಾಡಿದರು.

ಸಂವಿಧಾನದ ರಚನೆಗೆ ಅಂಬೇಡ್ಕರ್‌ ಮತ್ತು ಕಾಂಗ್ರೆಸ್‌ ಪಕ್ಷದ ಮುಖಂಡರು ಸಾಕಷ್ಟು ತ್ಯಾಗಗಳನ್ನು ಮಾಡಿದ್ದಾರೆ. ಸಂವಿಧಾನ ಬದಲಾಯಿಸಲು ಅವಕಾಶ ನೀಡುವುದಿಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

ADVERTISEMENT

ನುಡಿದಂತೆ ನಡೆ: ಉತ್ತರ ಕರ್ನಾಟಕದಲ್ಲಿ ಜನಾಶೀರ್ವಾದ ಯಾತ್ರೆಯುದ್ದಕ್ಕೂ ಬಸವಣ್ಣನವರ ವಚನದ ಸಾರಗಳನ್ನು ಉದ್ಧರಿಸಿದ್ದ ರಾಹುಲ್‌ ಚಾಮರಾಜನಗರದಲ್ಲೂ ಅದನ್ನು ಪುನರಾವರ್ತಿಸಿದರು.

ಬಸವಣ್ಣನವರ ವಚನದಲ್ಲಿ ಹೇಳಿದಂತೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹೇಳಿದ್ದನ್ನು ಮಾಡಿತೋರಿಸಿದೆ ಎಂದರು.

ಆದಿವಾಸಿಗಳು, ದಲಿತರು ಮತ್ತು ಹಿಂದುಳಿದ ವರ್ಗದವರ ಅಭಿವೃದ್ಧಿಗಾಗಿ ನರೇಂದ್ರ ಮೋದಿ ಸರ್ಕಾರ ಇಡೀ ದೇಶಕ್ಕೆ ನೀಡುತ್ತಿರುವ ಅನುದಾನದ ಅರ್ಧದಷ್ಟು ಮೊತ್ತವನ್ನು ಸಿದ್ದರಾಮಯ್ಯ ಅವರು ಕರ್ನಾಟಕವೊಂದರಲ್ಲೇ ವೆಚ್ಚ ಮಾಡುತ್ತಿದ್ದಾರೆ. ಮುಂದಿನ ಬಾರಿ ಕಾಂಗ್ರೆಸ್‌ಗೆ ಅಧಿಕಾರ ನೀಡಿದರೆ ಇದರ ಇಮ್ಮಡಿ ಮೊತ್ತವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗೆ ಖರ್ಚು ಮಾಡಲಾಗುವುದು ಎಂದು ಭರವಸೆ ನೀಡಿದರು.

ಸಮಾವೇಶದ ಬಳಿಕ ರಾಹುಲ್‌ ಅವರು ನಗರದಲ್ಲಿ ರೋಡ್‌ ಷೋ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.