ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಲ್ಲಿ ವಿಳಂಬ ಮತ್ತು ರಾಜಕೀಯ ಗೊಂದಲದಿಂದಾಗಿ ನೂತನ ಸಚಿವರಿಗೆ ಮನೆಗಳು ಹಾಗೂ ಹೊಸ ಶಾಸಕರಿಗೆ ಕೊಠಡಿಗಳ ಹಂಚಿಕೆ ಆಗಿಲ್ಲ.
ಚುನಾವಣಾ ಫಲಿತಾಂಶ ಪ್ರಕಟವಾಗಿ ತಿಂಗಳಾಗುತ್ತಾ ಬಂದಿದೆ. ಆದರೆ, ಹೊಸ ಶಾಸಕರಿಗೆ ಕೊಠಡಿ ಹಂಚಿಕೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿಲ್ಲ. ಸಾಕಷ್ಟು ಮಾಜಿ ಶಾಸಕರು ತಮ್ಮ ಕೊಠಡಿಯ ಕೀಲಿಯನ್ನು ಹಿಂದಕ್ಕೆ ಕೊಟ್ಟಿದ್ದಾರೆ. ಇನ್ನೂ ಕೆಲವರು ಕೊಟ್ಟಿಲ್ಲ. ಇದರಿಂದಾಗಿ ಹೊಸದಾಗಿ ಆಯ್ಕೆ ಆಗಿರುವ ಶಾಸಕರು ಬೆಂಗಳೂರಿಗೆ ಬಂದರೆ ಪರದಾಡುವಂತಾಗಿದೆ.
ಈಗ ನಾವು ಬೆಂಗಳೂರಿಗೆ ಬಂದಾಗ ಹೊಟೇಲ್ ಅಥವಾ ಸ್ನೇಹಿತರ ಕೊಠಡಿಯಲ್ಲಿ ಉಳಿದುಕೊಳ್ಳುತ್ತಿದ್ದೇವೆ. ಶಾಸಕರ ಭವನದಲ್ಲಿ ಕೊಠಡಿ ಹಂಚಿಕೆ ಆಗಿಲ್ಲ. ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ. ಹಂಚಿಕೆ ಮಾಡುತ್ತೇವೆ ಎಂಬ ಭರವಸೆ ನೀಡಿದ್ದಾರೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮತ್ತು ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ‘ಪ್ರಜಾವಾಣಿ’ಗೆ ತಿಳಿಸಿದರು.
2013 ರಲ್ಲಿ ಶಾಸಕರ ಭವನದಲ್ಲಿ ಕೊಠಡಿಗಳ ಕೊರತೆಯಿಂದಾಗಿ ಕೆಲವು ಶಾಸಕರಿಗೆ ಹೊಟೇಲ್ಗಳಲ್ಲಿ ವ್ಯವಸ್ಥೆ ಮಾಡಿ ಅದರ ಬಾಡಿಗೆಯನ್ನು ಸಚಿವಾಲಯವೇ ನೀಡಿತ್ತು. ಈ ಬಾರಿ ಅಂತಹ ಸ್ಥಿತಿ ಇಲ್ಲ. ಹೊಸ ಬ್ಲಾಕ್ ನಿರ್ಮಾಣ ಮಾಡಿರುವುದರಿಂದ, ಹೆಚ್ಚುವರಿ ಕೊಠಡಿಗಳು ಇವೆ. ಹೊಸ ಬ್ಲಾಕ್ನ 68 ಕೊಠಡಿಗಳು ಸೇರಿ ಒಟ್ಟು 302 ಕೊಠಡಿಗಳಿವೆ. ಇದರಿಂದ ಕೊಠಡಿಗಳ ಕೊರತೆ ಆಗುವುದಿಲ್ಲ ಎಂದು ಮೂಲಗಳು ಹೇಳಿವೆ.
‘ಸಚಿವರಿಗೇ ಇನ್ನು ಮನೆಗಳನ್ನು ಹಂಚಿಕೆ ಮಾಡಿಲ್ಲ. ಇವರಿಗೆ ಮನೆಗಳ ಹಂಚಿಕೆ ಬಳಿಕ ಶಾಸಕರಿಗೆ ಕೊಠಡಿಗಳನ್ನು ಹಂಚಿಕೆ ಮಾಡಲಾಗುವುದು’ ಎಂದು ವಿಧಾನಸಭೆ ಸಚಿವಾಲಯ ಕಾರ್ಯದರ್ಶಿ ಎಸ್.ಮೂರ್ತಿ ತಿಳಿಸಿದರು.
ಈ ಬಾರಿ ಕೊಠಡಿಗಳ ಕೊರತೆ ಆಗುವುದಿಲ್ಲ. ಶಾಸಕರನ್ನು ಬೀದಿಗೆ ನಿಲ್ಲಿಸುವ ಪ್ರಸಂಗ ಬರುವುದಿಲ್ಲ ಎಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.