ಹೊನ್ನಾಳಿ: ‘ಮಳಲಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಮಲ್ಲೇಶಪ್ಪ ಅವರ ಕುಟುಂಬಕ್ಕೆ ವಿತರಿಸಿದ್ದ₹ 5 ಲಕ್ಷದ ಪರಿಹಾರ ಚೆಕ್ ಅನ್ನು ಬಿಜೆಪಿ ಮುಖಂಡ ಎಂ.ಪಿ.ರೇಣುಕಾಚಾರ್ಯ ಅವರು ಮರಳಿ ಪಡೆದು ಪುನಃ ವಿತರಿಸುವ ಮೂಲಕ ಕೀಳು ಮಟ್ಟದ ರಾಜಕಾರಣ ಮಾಡಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಡಿ.ಎಸ್. ಪ್ರದೀಪ್ ಗೌಡ ಆರೋಪಿಸಿದರು.
‘ಫೆ.28ರಂದು ನಡೆದ ನ್ಯಾಮತಿ ತಾಲ್ಲೂಕು ಉದ್ಘಾಟನಾ ಸಮಾರಂಭದಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಶಾಸಕ ಡಿ.ಜಿ. ಶಾಂತನ
ಗೌಡ ಅವರು ಸರ್ಕಾರದಿಂದ ಮಂಜೂರಾದ ಪರಿಹಾರದ ಚೆಕ್ ಸಂತ್ರಸ್ತರ ಕುಟುಂಬಕ್ಕೆ ವಿತರಿಸಿದ್ದರು. ಆದರೆ, ರೇಣುಕಾಚಾರ್ಯ ಅವರು ಮಾ.1ರಂದು ಆ ಚೆಕ್ ಅನ್ನು ಮಲ್ಲೇಶಪ್ಪರ ಪತ್ನಿ ಮಲ್ಲಮ್ಮ ಅವರಿಂದ ಪಡೆದು ಪುನಃ ವಿತರಿಸಿ ಫೋಟೊ ತೆಗೆಸಿಕೊಂಡು ಫೇಸ್ಬುಕ್ನಲ್ಲಿ ಹಾಕಿಕೊಂಡಿದ್ದಾರೆ. ತಾವು ಜಿಲ್ಲಾಧಿಕಾರಿ ಮೇಲೆ ಒತ್ತಡ ಹೇರಿ ಹಣ ಮಂಜೂರು ಮಾಡಿಸಿರುವುದಾಗಿ ಬರೆದುಕೊಂಡಿದ್ದಾರೆ. ಇಂಥ ರಾಜಕಾರಣ ಮಾಡುವವರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಶಾಂತನಗೌಡರ ಪುತ್ರ ಪ್ರದೀಪಗೌಡ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ತಮ್ಮ ಬಂಡವಾಳ ಬಯಲಾಗಬಹುದು ಎಂಬ ಆತಂಕದಿಂದ ರೈತನ ಕುಟುಂಬಕ್ಕೆ ಚೆಕ್ ವಿತರಿಸಿದ ಫೋಟೊವನ್ನು ರೇಣುಕಾಚಾರ್ಯ ಪತ್ರಿಕೆಗಳಿಗೆ ಬಿಡುಗಡೆ ಮಾಡಿಲ್ಲ’ ಎಂದು ಅವರು ದೂರಿದರು.ಎನ್ಎಸ್ಯುಐ ಘಟಕದ ತಾಲ್ಲೂಕು ಅಧ್ಯಕ್ಷ ಮನೋಜ್ ವಾಲಜ್ಜಿ, ಕಾಂಗ್ರೆಸ್ನ ಸಾಮಾಜಿಕ ಜಾಲತಾಣದ ಮುಖ್ಯಸ್ಥ ದರ್ಶನ್ ಬಳ್ಳೇಶ್ವರ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.