ADVERTISEMENT

`ಸತ್ತು ಹೋದವ' ಮರಳಿ ಬಂದಾಗ..!

​ಪ್ರಜಾವಾಣಿ ವಾರ್ತೆ
Published 21 ಜುಲೈ 2013, 20:10 IST
Last Updated 21 ಜುಲೈ 2013, 20:10 IST
ಕುಟುಂಬದ ಸದಸ್ಯರೊಂದಿಗೆ ಪರಸಪ್ಪ ಹುಲ್ಯ್‌ಳ
ಕುಟುಂಬದ ಸದಸ್ಯರೊಂದಿಗೆ ಪರಸಪ್ಪ ಹುಲ್ಯ್‌ಳ   

ಅಮೀನಗಡ (ಬಾಗಲಕೋಟೆ ಜಿಲ್ಲೆ): ಕೂಲಿ ಅರಸಿ ಉಡುಪಿಗೆ ದುಡಿಯಲು ಹೋದ ವ್ಯಕ್ತಿಯೊಬ್ಬ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆಂದು ತಿಳಿದು ಮೃತದೇಹ ತಂದು ಅಂತ್ಯಸಂಸ್ಕಾರ ನಡೆಸಿದ್ದ ಕುಟುಂಬ ನೋವಿನಲ್ಲಿರುವಾಗಲೇ ಮೃತ ವ್ಯಕ್ತಿ ಮನೆಗೆ ಬಂದಾಗ ಎಲ್ಲರಿಗೂ ಆಶ್ಚರ್ಯ, ಮೇರೆ ಮೀರಿದ ಸಂತಸ ಮನೆ ಮಾಡಿತ್ತು.

ಕೂಲಿ ಹುಡುಕಿಕೊಂಡು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಸೂಳೇಭಾವಿ ಗ್ರಾಮದ ಪರಸಪ್ಪ ಹುಲ್ಯ್‌ಳ ಉಡುಪಿಗೆ ಹೋಗಿದ್ದರು. ದಿ. 14ರಂದು ಉಡುಪಿಯಲ್ಲಿ ಬಸ್ ಅಪಘಾತದಲ್ಲಿ ಮೃತಪಟ್ಟ ನಾಲ್ವರಲ್ಲಿ ಒಬ್ಬನೆಂದು ತಿಳಿಸಲಾಯಿತು. ಉಡುಪಿಗೆ ತೆರಳಿದ ಕುಟುಂಬದ ಸದಸ್ಯರು, ಇದು ನಮ್ಮ ಪರಸಪ್ಪನ ದೇಹವಲ್ಲ ಎಂದು ಹೇಳಿದ್ದಾರೆ. ಆದರೆ ಪರಸಪ್ಪ ಜೊತೆ ಕೆಲಸ ಮಾಡುತ್ತಿದ್ದವರು ಇದು ಪರಸಪ್ಪನದೇ ಮೃತದೇಹ ಎಂದು ಹೇಳಿದ್ದಾರೆ. ಹೀಗಾಗಿ ಅಲ್ಲಿನ ಗುರುವಾರ ಮೃತದೇಹವನ್ನು ಕುಟುಂಬದವರಿಗೆ ಒಪ್ಪಿಸಿದ ಬಳಿಕ ಅಂತ್ಯ ಸಂಸ್ಕಾರ ನಡೆಸಿದ್ದರು.

ವಾರದ ಬಳಿಕ ಸೂಳೇಭಾವಿಯಿಂದ ಉಡುಪಿಗೆ ತೆರಳಿದ ರಮೇಶ ಗಂಜಿಹಾಳ ಅವರಿಗೆ ಪರಸಪ್ಪ ಭೇಟಿಯಾಗಿದ್ದಾರೆ. ವಿಷಯ ತಿಳಿದ ನಂತರ ಪರಸಪ್ಪ ಖುದ್ದು ಫೋನ್ ಮಾಡಿದ್ದರೂ ನಂಬಿಲ್ಲ. ಶನಿವಾರ ಸತ್ತು ಹೋದವ ಪುನಃ ಶನಿವಾರವೇ ಊರಿಗೆ ಬಂದಾಗ ಕುಟುಂಬದ ಸದಸ್ಯರಿಗೆ, ಊರಿನ ಜನರಿಗೆ ಆಶ್ಚರ್ಯವಾಗಿತ್ತು. `ನನ್ನ ತಮ್ಮ ಮನೆಗೆ ಬಂದಿದ್ದಾನೆ. ಬಹಳಷ್ಟು ಸಂತಸವಾಗಿದೆ' ಎಂದು ಅಣ್ಣ ಮಹಾಂತೇಶ್ ಸಂತಸ ವ್ಯಕ್ತಪಡಿಸಿದರು.

ಅಧಿಕಾರಿಗಳು ಮತ್ತು ಕೂಲಿ ಕಾರ್ಮಿಕರು ನಿಖರವಾಗಿ ಗುರುತು ಹಿಡಿಯದ ಕಾರಣ, ವಾರದಿಂದ ದುಃಖ ಸಾಗರದಲ್ಲಿ ತೇಲಿದ್ದ ಕುಟುಂಬದಲ್ಲೆಗ ಸಂತಸದ ವಾತಾವರಣ ಸೃಷ್ಟಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.