ADVERTISEMENT

ಸಮಾನತೆ ಸರ್ಕಾರದ ಧ್ಯೇಯವಾಗಲಿ: ಪೇಜಾವರ ಶ್ರೀ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 19:30 IST
Last Updated 22 ಜನವರಿ 2011, 19:30 IST

ದಾವಣಗೆರೆ: ಎಲ್ಲ ಜಾತಿ, ಧರ್ಮಗಳನ್ನು ಸರ್ಕಾರ ಸಮಾನವಾಗಿ ಕಾಣಬೇಕು. ಅವಕಾಶಗಳು ಎಲ್ಲರಿಗೂ ಸಮಾನವಾಗಿ ದೊರೆಯಬೇಕು. ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರ ನಡುವೆ ಭೇದಭಾವ ಮಾಡಬಾರದು ಎಂದು ಪೇಜಾವರ ಅಧೋಕ್ಷಜ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಸಲಹೆ ನೀಡಿದರು. ನಗರದಲ್ಲಿ ಶನಿವಾರ ಜಯದೇವ ಮುರುಘರಾಜೇಂದ್ರ ಶ್ರೀಗಳ 54ನೇ ಸ್ಮರಣೋತ್ಸವದಲ್ಲಿ ‘ಧರ್ಮ ಮತ್ತು ರಾಜಕಾರಣ’ ಕುರಿತು ಅವರು ಮಾತನಾಡಿದರು.

ಎಲ್ಲ ವ್ಯವಹಾರಗಳಿಗೂ ಧರ್ಮ ಚೈತನ್ಯದ ಸಾರ. ಎಲ್ಲ ಕ್ಷೇತ್ರಗಳಿಗೆ ಅನ್ವಯಿಸುವ ನೈತಿಕ ಮೌಲ್ಯಗಳೇ ಧರ್ಮ. ಮಠಾಧೀಶರು ರಾಜಕಾರಣದಿಂದ ದೂರ ಇರಬೇಕು. ಧರ್ಮ ರಾಜಕಾರಣದಲ್ಲಿ ಬೆರೆಯದೇ ರಾಜಕಾರಣಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಕೆಲಸವಾಗಬೇಕು ಎಂದು ಸೂಚಿಸಿದರು. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು, ಇತರ ಸಂಸ್ಥೆಗಳ ನಡುವೆ ಭೇದ ಮಾಡಬಾರದು. ಅಲ್ಪಸಂಖ್ಯಾತರಿಗೆ ಧಾರ್ಮಿಕ ಯಾತ್ರೆ ಕೈಗೊಳ್ಳಲು ಸರ್ಕಾರ ಧನಸಹಾಯ ನೀಡುವಂತೆ ಕಾಶಿ, ವಾರಣಾಸಿಗಳಿಗೆ ಹೋಗಲು ಹಿಂದುಗಳಿಗೂ ಧನ ಸಹಾಯ ನೀಡಬೇಕು ಎಂದು ಅಭಿಪ್ರಾಯಪಟ್ಟರು. ವಿದೇಶಗಳಲ್ಲಿ ಸಂಗ್ರಹಿಸಿರುವ ಅಕ್ರಮ ಹಣವನ್ನು ತರುವ ಪ್ರಯತ್ನವನ್ನು ರಾಜಕಾರಣಿಗಳು ಮಾಡಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.