ಸಾಗರ: ‘ಜನರಲ್ಲಿರುವ ಮೌಢ್ಯವನ್ನು ದೂರ ಮಾಡುವುದು ಕಷ್ಟ. ಅವುಗಳನ್ನು ಪ್ರಶ್ನಿಸಿದರೆ ನಮಗೆ ಕಲ್ಲು ಹೊಡೆಯುತ್ತಾರೆ’ ಎಂದು ಮೌಢ್ಯ ಪ್ರತಿಬಂಧಕ ಕಾಯ್ದೆಯ ಕರಡು ಸಮಿತಿಯ ಅಧ್ಯಕ್ಷರೂ ಆಗಿರುವ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಇಲ್ಲಿನ ದೀವರ ಯುವ ವೇದಿಕೆ ಶನಿವಾರ ಹಮ್ಮಿಕೊಂಡಿದ್ದ ‘ಭೂಮಣ್ಣಿ ಬುಟ್ಟಿಗಳ ಪ್ರದರ್ಶನ’ದಲ್ಲಿ ಮಾತನಾಡಿದ ಅವರು, ‘ಈ ಭಾಗದಲ್ಲಿ ಮೌಢ್ಯದ ಹೆಸರಿನಲ್ಲಿ ಮುಟ್ಟಾದ ಮಹಿಳೆಯರನ್ನು ಗ್ರಾಮದಿಂದ ಹೊರಕ್ಕೆ ಕಳುಹಿಸುವ ಪದ್ಧತಿ ಆಚರಣೆಯಲ್ಲಿರುವುದು ಸುದ್ದಿಯಾಗುತ್ತಿದೆ. ಆದರೆ, ಇಂತಹ ಪದ್ಧತಿಯನ್ನು ಪ್ರಶ್ನಿಸಲು ಹೋದರೆ ಜನ ಮೈಮೇಲೆ ಬರುತ್ತಾರೆ’ ಎಂದರು.
‘ಈ ಭಾಗದಲ್ಲಿ ಬೆತ್ತಲೆ ಸೇವೆಯಂತಹ ಅನಿಷ್ಟ ಪದ್ಧತಿ ಇರುವುದು ಗೊತ್ತಿದೆ. ಆದರೆ, ಭೂಮಿ ಹೋರಾಟವೇ ಮುಖ್ಯವಾಗಿರುವುದರಿಂದ ಅಂಥ ಆಚರಣೆ ವಿರುದ್ಧ ಧ್ವನಿ ಎತ್ತಲು ಮುಂದಾಗಲಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
ಬಳಿಕ ಮಾತನಾಡಿದ ಬೈಲೂರಿನ ನಿಷ್ಕಲಮಠದ ನಿಜಗುಣಪ್ರಭು ಸ್ವಾಮೀಜಿ, ‘ಕಾಗೋಡು ತಿಮ್ಮಪ್ಪ ಅವರು ತಮ್ಮ ಪರಿಸ್ಥಿತಿಗೆ ಅನುಗುಣವಾಗಿ ಮಾತನಾಡಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.